Kannada NewsKarnataka NewsLatestPolitics

*ವಿಧಿಲೀಲೆ ರಾಜ ವೆಂಕಟಪ್ಪ ನಾಯಕ ಅವರನ್ನು ನಮ್ಮಿಂದ ದೂರ ಮಾಡಿದೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ರಾಜ್ಯಸಭೆ ಚುನಾವಣೆ ಮತದಾನದ ವೇಳೆಗೆ ಬರುತ್ತೇನೆ ಎಂದು ಹೇಳಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ವಿಧಿ ನಮ್ಮಿಂದ ದೂರ ಮಾಡಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಶಾಸಕರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಶಿವಕುಮಾರ್ ಅವರು ಮಾಧ್ಯಮಗಳ ಜತೆ ಮಾತನಾಡಿ ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;

“ಇಂದು ನನ್ನ ಜೀವನದ ದುಃಖದ ದಿನ. ಮೂರ್ನಾಲ್ಕು ದಿನಗಳ ಹಿಂದೆ ನಾನು, ಜಿ.ಸಿ ಚಂದ್ರಶೇಖರ್, ಸೋಮಶೇಖರ್ ಅವರ ಜತೆಗೂಡಿ ಆಸ್ಪತ್ರೆಗೆ ಬಂದು ರಾಜಾ ವೆಂಕಟಪ್ಪ ನಾಯಕ ಅವರ ಆರೋಗ್ಯ ವಿಚಾರಿಸಿದ್ದೆ. ಅವರು ಐಸಿಯುನಿಂದ ವಾರ್ಡ್ ಗೆ ಶಿಫ್ಟ್ ಆಗಿದ್ದರು. ಅವರು ಕಾಗದದ ಮೇಲೆ ಬರೆದು ನನ್ನ ಜತೆ ಮಾತನಾಡಿದ್ದರು. ರಾಜ್ಯಸಭೆ ಮತದಾನದ ವೇಳೆಗೆ ಬರುತ್ತೇನೆ ಎಂದು ಹೇಳಿದ್ದರು.

ಅವರು ವಾಪಸ್ ಬರುತ್ತಾರೆ ಎಂದು ಭಾವಿಸಿದ್ದೆ. ಆದರೆ ಇಂದು ಮಧ್ಯಾಹ್ನ ಭಗವಂತ ಅವರನ್ನು ಕರೆದುಕೊಂಡಿದ್ದಾನೆ. ನಾವು ಮಾಡಿದ ಸಮೀಕ್ಷೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಇವರೇ ಮೊದಲ ಅಭ್ಯರ್ಥಿ ಎಂದು ಕೂಡ ವರದಿಯಲ್ಲಿ ವ್ಯಕ್ತವಾಗಿತ್ತು. ವಿಧಿಲೀಲೆ ಅವರನ್ನು ನಮ್ಮಿಂದ ದೂರ ಮಾಡಿದೆ.

ಬಹಳ ಸರಳತೆಯ ನಾಯಕರಾಗಿದ್ದ ಅವರು ಯಾರ ಮನಸ್ಸನ್ನೂ ನೋಯಿಸುತ್ತಿರಲಿಲ್ಲ. ಆಮೂಲಕ ಜನರ ಮನ ಗೆದ್ದಿದ್ದರು. ನನಗೆ ಆತ್ಮೀಯ ಸ್ನೇಹಿತರೂ ಆಗಿದ್ದರು. ಅವರನ್ನು ನಾವು ಕಳೆದುಕೊಂಡಿದ್ದೇವೆ.

ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು ಹಾಗೂ ಕ್ಷೇತ್ರದ ಜನರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದರು.

Related Articles

Back to top button