Kannada NewsKarnataka NewsLatestPolitics

*ದಲಿತರು ಸಿಎಂ ಆಗಬೇಕೆಂಬ ಕೂಗು ಇಂದು, ನಿನ್ನೆದಲ್ಲ: ಸಚಿವ ಸತೀಶ್‌ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ದಲಿತರು ಸಿಎಂ ಆಗಬೇಕೆಂಬ ಕೂಗು ಇಂದು, ನಿನ್ನೆದಲ್ಲ. ಈ ಕೂಗು ಮಲ್ಲಿಕಾರ್ಜುನ ಖರ್ಗೆ ಅವರಿಂದ ಆರಂಭವಾಗಿದ್ದು, ದಲಿತರು ಸಿಎಂ ಆಗಬೇಕೆಂಬ ಬೇಡಿಕೆ ಕಾಂಗ್ರೆಸ್‌ ನಲ್ಲಿ ಅಷ್ಟೇ ಅಲ್ಲ. ಬಿಜೆಪಿ, ಜೆಡಿಎಸ್‌ ನಲ್ಲೂ ಇದೆ. ಆದರೆ ಇದುವರೆಗೆ ದಲಿತರು ಯಾವುದೇ ಪಕ್ಷದಲ್ಲಿ ಸಿಎಂ ಆಗಲು ಸಾಧ್ಯವಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಕುವೆಂಪು ನಗರದ ಸ್ವಗೃಹದಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ಕೇಳಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್‌. ಸಿ. ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಕಳೆದ 20 ವರ್ಷದಿಂದ ಮಲ್ಲಿಕಾರ್ಜುನ ಖರ್ಗೆ, 2013ರಲ್ಲಿ ಡಾ. ಜಿ. ಪರಮೇಶ್ವರ್‌ ಅವರು ಸಿಎಂ ಆಗಬೇಕೆಂಬ ಕೂಗು ಇತ್ತು. ಆದರೆ ಅವರಿಬ್ಬರಿಗೂ ಸಿಎಂ ಆಗುವ ಭಾಗ್ಯ ಸಿಗಲಿಲ್ಲ. ನಾನು ಅನೇಕ ಸಮಾವೇಶಗಳಲ್ಲಿ ದಲಿತರು ಸಿಎಂ ಆಗಲೇಬೇಕೆಂದು ಹೇಳಿದ್ದೇನೆ ಎಂದರು.

ಎಸ್ಸಿ, ಎಸ್ಟಿ ಸಮಾಜದವರು ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ನಮ್ಮ ಕಡೆ ಸೈನಿಕರು ಜಾಸ್ತಿ ಇದ್ದಾರೆ. ಸೈನಿಕರನ್ನು ಲೀಡ್‌ ಮಾಡುವ ಕ್ಯಾಪ್ಟನ್‌ ಇಲ್ಲ. ಕ್ಯಾಪ್ಟನ್‌ ಪಾತ್ರಗಳನ್ನು ರೆಡಿ ಮಾಡಬೇಕಿದೆ. ಹೈಕಮಾಂಡ್‌ ಎದುರು ಪ್ರಭಾವ ಬೀರುವಲ್ಲಿ ವಿಫಲರಾಗಿದ್ದೇವೆ. ಈ ಕುರಿತು ಲೋಕಸಭೆ ಚುನಾವಣೆ ನಂತರ ದಲಿತ ಸಿಎಂ ಬಗ್ಗೆ ದನಿ ಎತ್ತುತ್ತೇವೆ. ಈಗ ಲೋಕಸಭೆಯಲ್ಲಿ ಹೆಚ್ಚಿನ ಸೀಟು ಗೆಲ್ಲಲು ಆದ್ಯತೆ ನೀಡುತ್ತೇವೆಂದು ತಿಳಿಸಿದರು.

ಕಾಂಗ್ರೆಸ್‌ ಪಕ್ಷ ಅಷ್ಟೇ ಅಲ್ಲ. ಬಿಜೆಪಿಯಲ್ಲಿ ಗೋವಿಂದ ಕಾರಜೋಳ, ಜೆಡಿಎಸ್‌ ನಲ್ಲಿ ಎಚ್.‌ಕೆ. ಕುಮಾರಸ್ವಾಮಿ ಅವರಿಗೂ ಸಿಎಂ ಆಗುವ ಅವಕಾಶ ಇತ್ತು. ಆದರೆ ಬಿಜೆಪಿ, ಜೆಡಿಎಸ್‌ನಲ್ಲೂ ದಲಿತ ನಾಯಕರು ಹೈಕಮಾಂಡ್‌ ಎದುರು ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ ಎಂದರು.

ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳ ಲೋಕಸಭೆ ಅಭ್ಯರ್ಥಿಗಳ ಹೆಸರು 1ನೇ ಪಟ್ಟಿಯಲ್ಲಿ ಆಗಲ್ಲ. ಎರಡನೇ ಪಟ್ಟಿಯಲ್ಲಿ ಬಿಡುಗಡೆಯಾಗುತ್ತದೆ. ಈ ಕುರಿತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಜಿಲ್ಲೆಯ ಎಲ್ಲ ರಾಜಕಾರಣಿಗಳು ಎರಡ್ಮೂರು ದಿನಗಳಲ್ಲಿ ಇನ್ನೊಂದು ಸಭೆ ಮಾಡಲು ಸೂಚಿಸಿದ್ದಾರೆ. ಜಿಲ್ಲೆಯ ಎಲ್ಲಾ ನಾಯಕರು ಸಹಮತದಿಂದ ಅಭ್ಯರ್ಥಿಗಳನ್ನು ಸೂಚಿಸುತ್ತೇವೆಂದು ತಿಳಿಸಿದರು.

ಯಾವುದೇ ಅಭ್ಯರ್ಥಿಗಳನ್ನು ವಿಕ್‌ ಎಂದು ಹೇಳಲು ಆಗಲ್ಲ. ಡೊದ್ದ ಸಮುದಾಯ ಇದ್ದಾಗ ಗೆದ್ದ ಉದಾಹರಣೆಗಳು ಇವೆ. ಜಿಲ್ಲೆಯಲ್ಲಿ ಕುರುಬ ಸಮುದಾಯದ ಶಾಸಕರು ಇಲ್ಲ. ಅವರಿಗೂ ಅವಕಾಶ ಸಿಕ್ಕಿಲ್ಲ ಎಂಬ ದೃಷ್ಟಿಯಿಂದ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಒಂದನ್ನ ಕುರುಬ ಸಮುದಾಯಕ್ಕೆ ನೀಡಬೇಕೆಂದು ಚರ್ಚೆ ನಡೆದಿದ್ದು, ಇನ್ನು ಅಂತಿಮವಾಗಿಲ್ಲ ಎಂದರು.

ನಿಗಮ, ಮಂಡಳಿಗಳ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ನಿರಾಶೆಯಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್‌ ಜಾರಕಿಹೊಳಿ, ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ಯಾರು ನಿರಾಶೆಯಾಗಿಲ್ಲ. ಬೆಳಗಾವಿಯ ಬುಡಾ, ಕಾಡಾದಲ್ಲಿ ಅವಕಾಶ ಇದೆ. ಆ ಎರಡು ಸ್ಥಾನಗಳನ್ನು ಸ್ಥಳೀಯರಿಗೆ ನೀಡಲಾಗುವುದೆಂದು ಹೇಳಿದರು.

ಶಾಸಕ ಲಕ್ಷ್ಮಣ ಸವದಿಗೆ ಒಳ್ಳೆಯ ಭವಿಷ್ಯವಿದೆ: ಶಾಸಕ ಲಕ್ಷ್ಮಣ ಸವದಿಗೆ ಒಳ್ಳೆಯ ಭವಿಷ್ಯವಿದೆ ಎಂದು ಸಿಎಂ ಸಿದ್ದರಾಮಯ್ಯನವರು ಅಥಣಿಯಲ್ಲಿ ಹೇಳಿದ್ದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್‌, ಶಾಸಕ ಲಕ್ಷ್ಮಣ ಸವದಿಗೆ ಒಳ್ಲೆಯ ಭವಿಷ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಮುಂಚೆ ನಾನೇ ಹೇಳಿದ್ದೇನೆ. ಲೋಕಸಭೆ ಚುನಾವಣೆ ನಂತರ ಶಾಸಕ ಲಕ್ಷ್ಮಣ ಸವದಿ ಅವರಿಗೆ ಒಳ್ಳೆಯ ಅವಕಾಶ ದೊರಕಬಹುದು ಎಂದು ತಿಳಿಸಿದ್ದಾರೆ.

Related Articles

Back to top button