Latest

ಸಿಎಂ ಪರ ಶಾಸಕರ ಸಹಿ ಸಂಗ್ರಹ ಎಂದ ರೇಣುಕಾಚಾರ್ಯ; ನಿಯಮ ಮೀರಿದರೆ ಕ್ರಮ ಎಂದ ಸಚಿವ ಅಶೋಕ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಅವರ ಪರ ನಾವಿದ್ದೇವೆ ಎಂದು ಸಿಎಂ ಪರವಾಗಿ 65 ಶಾಸಕರ ಸಹಿ ಸಂಗ್ರಹ ಮಾಡಿದ್ದೇವೆ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಸಿಎಂ ಪರವಾಗಿ 65 ಶಾಸಕರು ಸಹಿ ಸಂಗ್ರಹ ಮಾಡಿದ್ದೇವೆ. ಸಹಿ ಸಂಗ್ರಹ ಪತ್ರ ನನ್ನ ಬಳಿ ಇದ್ದು, ಕೊರೊನಾ ಸಂಕಷ್ಟ ಮುಗಿದ ಬಳಿಕ ಹೈಕಮಾಂಡ್ ಗೆ ಸಲ್ಲಿಸುವುದಾಗಿ ತಿಳಿಸಿದರು.

ಪತ್ರದಲ್ಲಿ ಯಡಿಯುರಪ್ಪನವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು ಹಾಗೂ ಸಿಎಂ ವಿರುದ್ಧ ಅಪಸ್ವರ ಎತ್ತಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ ಎಂದರು.

ರೇಣಿಕಾಚಾರ್ಯ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್, ಸಿಎಂ ಪರವಾಗಿಯಾಗಲಿ, ವಿರೋಧವಾಗಿಯಾಗಲಿ ಯಾವುದೇ ರೀತಿಯ ಸಹಿ ಸಂಗ್ರಹ ಮಾಡುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಸಹಿ ಸಂಗ್ರಹ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Home add -Advt

ಈ ನಡುವೆ ಸಹಿ ಸಂಗ್ರಹ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದಲ್ಲಿ ಯಾವುದೇ ಶಾಸಕರಿಂದ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ. ಸಹಿ ಸಂಗ್ರಹ ಮಾಡುವ ಅಗತ್ಯವೂ ಇಲ್ಲ. ನಮ್ಮ ಆದ್ಯತೆ ಕೋವಿಡ್ ನಿರ್ವಹಣೆ. ಇನ್ನು ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಈ ಬಗ್ಗೆ ರಾಷ್ಟ್ರೀಯ ನಾಯಕರಲ್ಲಿ ಯಾವುದೇ ಚರ್ಚೆ ಕೂಡ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೃಷಿ ಜಿಲ್ಲೆಯಾಗಿ ಘೋಷಣೆಯಾಗುತ್ತಾ ಚಿಕ್ಕೋಡಿ?

Related Articles

Back to top button