
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ದೂರವಾಣಿ ಕರೆ ಮಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸಂತಾಪ ಸೂಚಿಸಿದ್ದಾರೆ
ಲತಾ ಮಂಗೇಶ್ಕರ್ ಸಹೋದರಿ ಉಷಾ ಮಂಗೇಶ್ಕರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಸಾಂತ್ವನ ಹೇಳಿದರು.
ಗಾನ ಕೋಗಿಲೆ ಎಂದೇ ಖ್ಯಾತಿ ಪಡೆದಿರುವ ಲತಾ ಮಂಗೇಶ್ಕರ್ ಅವರು ಹಲವು ತಲೆಮಾರುಗಳ ಜನರ ಉಸಿರಿನ ಜೊತೆ ಜೀವಂತವಾಗಿರುತ್ತಾರೆ. ದೇಶದ ಜನರ ಮನಸಿನಲ್ಲಿ ಲತಾ ಮಂಗೇಶ್ಕರ್ ವಿಶೇಷ ಸ್ಥಾನ ಪಡೆದಿದ್ದಾರೆ. ಅಂಥಹ ಮಹಾನ್ ಗಾಯಕಿಯನ್ನು ನಾವು ಕಳೆದುಕೊಂಡಿದ್ದೇವೆ. ಕರ್ನಾಟಕದಲ್ಲಿ ಲತಾ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆಗೆ ಆದೇಶಿಸಲಾಗಿದೆ ಎಂದು ಉಷಾ ಮಂಗೇಶ್ಕರ್ ಅವರಿಗೆ ತಿಳಿಸಿದ್ದಾರೆ.
ಆಶಾ ಭೋಸ್ಲೆಗೂ ಕರೆ
ಲತಾ ಸಹೋದರಿ ಆಶಾ ಭೋಸ್ಲೆ ಅವರಿಗೆ ಸಹ ದೂರವಾಣಿ ಮೂಲಕ ಸಾಂತ್ವನ ಹೇಳಿದ ಸಿಎಂ ಬಸವರಾಜ್ ಬೊಮ್ಮಾಯಿ , ಸಂತಾಪ ಸೂಚಿಸಿದರು.
ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನದಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ನೋವಿನ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ತಮಗೆ ಕರುಣಿಸಲಿ ಎಂದು ಮುಖ್ಯಮಂತ್ರಿಗಳು ಕೋರಿಕೊಂಡರು.
ಲತಾ ಮಂಗೇಶ್ಕರ್ ಬಗ್ಗೆ ಸಿಎಂ ತೋರಿರುವ ಪ್ರೀತಿ ಬಗ್ಗೆ ಆಶಾ ಮೆಚ್ವುಗೆ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯದ ಜೊತೆಗೆ ತಮ್ಮ ಒಡನಾಟ ಬಗ್ಗೆ ಆಶಾ ಸಿಎಂ ಎದುರು ಪ್ರಸ್ತಾಪಿಸಿದರು. ತಮ್ಮ ಸಂಬಂಧಿಕರು ಕರ್ನಾಟಕದಲ್ಲಿ ನೆಲೆಸಿರುವುದನ್ನು ಆಶಾ ಪ್ರಸ್ತಾಪಿಸಿದರು. ಆ ದೇವರು ಲತಾ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಬೊಮ್ಮಾಯಿ ಕೋರಿದರು.
ಪಂಚಭೂತಗಳಲ್ಲಿ ಲೀನರಾದ ಗಾನ ಕೋಗಿಲೆ