ಸಣ್ಣ ಗಲಾಟೆ ನಿಜ, ಆನಂದ ಸಿಂಗ್ ಕಣ್ಣಿಗೆ ಸಣ್ಣ ಏಟು ಬಿದ್ದಿದೆ ಅಷ್ಟೆ -ಜಮೀರ್ ಹೇಳಿಕೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಕಾಂಗ್ರೆಸ್ ಶಾಸಕರ ಮಧ್ಯೆ ಈಗಲ್ಟನ್ ರೆಸಾರ್ಟ್ ನಲ್ಲಿ ಗಲಾಟೆ ನಡೆದಿದ್ದು ನಿಜ, ಆದರೆ ಅಂತಹ ದೊಡ್ಡ ಪ್ರಮಾಣದಲ್ಲಿ ನಡೆದಿಲ್ಲ ಎಂದಿದ್ದಾರೆ ಸಚಿವ ಜಮೀರ್ ಅಹಮದ್.
ಆನಂದ್ ಸಿಂಗ್ ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದ್ದ ಜಮೀರ್, ಅಲ್ಲಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಸ್ನೇಹಿತರ ಮಧ್ಯೆ ಸಣ್ಣ ಗಲಾಟೆಯಾಗಿದೆ. ಎಲ್ಲ ಸ್ನೇಹಿತರ ಮಧ್ಯೆಯೂ ಗಲಾಟೆಯಾಗುತ್ತದೆ. ಅದರಲ್ಲಿ ವಿಶೇಷವೇನೂ ಇಲ್ಲ. ಏನೋ ಭಾರೀ ನಡೆದಿದೆ ನ್ನುವುದೆಲ್ಲ ಸುಳ್ಳು. ಆನಂದ ಸಿಂಗ್ ಕಣ್ಣಿಗೆ ಸಣ್ಣ ಏಟು ಬಿದ್ದಿದೆ ಎಂದು ಅವರು ಹೇಳಿದರು.
ಇದೀಗ ಕಾಂಗ್ರೆಸ್ ನಾಯಕರ ಸಭೆ ಕರೆಯಲಾಗಿದೆ. ಗಲಾಟೆ ಸಂಬಂಧ ಚರ್ಚಿಸಲು ಸಭೆ ನಡೆಸಲಾಗುತ್ತಿದೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ ರೆಸಾರ್ಟ್ ಗೆ ಧಾವಿಸಿದ್ದಾರೆ. ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಕೂಡ ರೆಸಾರ್ಟ್ ನತ್ತ ಆಗಮಿಸುತ್ತಿದ್ದಾರೆ. ಗಲಾಟೆ ನಡೆಸಿರುವ ಶಾಸಕ ಗಣೇಶ ಈಗ ರೂಂ ನಲ್ಲೇ ಬಂಧಿಯಾಗಿದ್ದಾರೆ ಎಂದು ಗೊತ್ತಾಗಿದೆ. ಅವರು ರೂಂ ನಿಂದ ಹೊರಗೆ ಬರುತ್ತಿಲ್ಲ.
ಪ್ರಕರಣ ಮುಚ್ಚಿಹಾಕಲು ಕಾಂಗ್ರೆಸ್ ನಾಯಕರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಯಾವುದೇ ಕಾರಣದಿಂದ ಪ್ರಕರಣ ದಾಖಲಾಗಲು ಅವಕಾಶ ನೀಡದಿರಲು ಯತ್ನಿಸಲಾಗುತ್ತಿದೆ. ಆದರೆ ಭಾರತೀಯ ಜನತಾ ಪಾರ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಬೇಕು. ಕಾಂಗ್ರೆಸ್ ಮತ್ತೊಮ್ಮೆ ಗೂಂಡಾ ಸಂಸ್ಕೃತಿಯನ್ನು ಪ್ರದರ್ಶಿಸಿದೆ. ರಾಜ್ಯ ಎಲ್ಲ 224 ಶಾಸಕರೂ ತಲೆತಗ್ಗಿಸುವಂತಹ ಪ್ರಕರಣ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.




