ವಿದ್ಯಾಗಮ ಶಾಲೆ ಆರಂಭದ ಮುನ್ಸೂಚನೆಯಲ್ಲ; ಸಚಿವರ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ರಾಜ್ಯದಲ್ಲಿ ಕೋವಿಡ್ ಪ್ರಮಾಣ ಕಡಿಮೆಯಿರುವುದರಿಂದ ಹಾಗೂ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ವಿದ್ಯಾಗಮ ಯೋಜನೆ ಪುನರಾರಂಭಿಸುತ್ತಿರುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ವಿದ್ಯಾಗಮ ಯೋಜನೆ ಶಾಲೆ ಆರಂಭದ ಮುನ್ಸೂಚನೆಯಲ್ಲ. ಈ ಬಗ್ಗೆ ಗೊಂದಲಗಳು ಬೇಡ. ಶಾಲೆ ಹಾಗೂ ಆನ್ ಲೈನ್ ತರಗತಿ ಸೌಲಭ್ಯವಿಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದಾಗಿ ವಂಚಿತರಾಗುತ್ತಿದ್ದಾರೆ. ಹಲವು ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ. ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ. ಇವುಗಳನ್ನು ತಡೆಯುವ ನಿಟ್ಟಿನಲ್ಲಿ ವಿದ್ಯಾಗಮ ಆರಂಭಿಸಲಾಗುತ್ತಿದೆ ಎಂದರು.
ತಜ್ನರ ವರದಿ, ಪೋಷಕರ ಅಭಿಪ್ರಯ, ಆರೋಗ್ಯ ಇಲಕಹೆ ಮಾಹಿತಿ ಪಡೆದು ವಿದ್ಯಾಗಮ ಆರಂಭಿಸುತ್ತಿದ್ದೇವೆ. ವಿದ್ಯಾಗಮಕ್ಕೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಬರಲೇಬೇಕೆಂದಿಲ್ಲ. ಪೋಷಕರು ಒಪ್ಪಿ ಕಳುಹಿಸಿದರೆ ಮಾತ್ರ ಬರಬಹುದು. ನಿಮ್ಮ ನಿಮ್ಮ ಮನೆಯ ಸಮೀಪವಿರುವ ಶಾಲೆಗಳ ಆವರಣದಲ್ಲೇ ವಿದ್ಯಾಗಮ ಆರಂಭಿಸಲಾಗುತ್ತಿದೆ. ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಯೋಜನೆ ಪುನರಾರಂಭವಾಗುತ್ತಿದೆ ಎಂದು ಹೇಳಿದರು.




