Karnataka NewsLatestPolitics

*ರೈತರ ಬದುಕು ಅಪಾಯದಲ್ಲಿದೆ: 10-15% ಬೆಳೆ ಕೂಡ ರೈತರ ಕೈ ಸೇರುವುದಿಲ್ಲ*

ಬರ ಪೀಡಿತ ತಾಲ್ಲೂಕುಗಳ ಎರಡನೇ ಪಟ್ಟಿ ಶೀಘ್ರವೇ ಪ್ರಕಟ: ಸಿಎಂ ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ: “ನಾವು ಮಾರ್ಗಸೂಚಿ ಅನುಸಾರ ಬರ ಪ್ರದೇಶ ಘೋಷಣೆ ಮಾಡಬೇಕು. ಅದರನ್ವಯ ಅಧ್ಯಯನ ಮಾಡಿ ಎರಡನೇ ಪಟ್ಟಿಯನ್ನು ಶೀಘ್ರವೇ ಘೋಷಣೆ ಮಾಡುತ್ತೇವೆ” ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

Home add -Advt

ಬರ ಪರಿಸ್ಥಿತಿ ಕುರಿತು ಸಿಎಂ ಡಿ.ಕೆ.ಶಿವಕುಮಾರ್ ಅವರು ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

“ಜಿಲ್ಲಾ ಸಚಿವರು ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ, ವಾಸ್ತವಾಂಶದ ವರದಿ ನೀಡಿದ್ದಾರೆ. ಅದರ ಜೊತೆಗೆ ಅಧಿಕಾರಿಗಳು ಅಧ್ಯಯನ ಮಾಡುತ್ತಿದ್ದಾರೆ. ಎರಡೂ ವರದಿ ಪರಿಶೀಲಿಸಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕಿದೆ” ಎಂದು ವಿವರಿಸಿದರು.

“ರೈತರ ಬದುಕು ಅಪಾಯದಲ್ಲಿದೆ. ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ. 50 ವರ್ಷಗಳಲ್ಲಿ ಭೀಕರ ಬರ ಪರಿಸ್ಥಿತಿಗೆ ಜಿಲ್ಲೆ ಒಳಗಾಗಿದೆ. ಈ ವರ್ಷ ಶೇ. 40 ರಷ್ಟು ಮಳೆ ಕಡಿಮೆಯಾಗಿದೆ. ನಾನು ಹೆಲಿಕಾಪ್ಟರ್ ನಲ್ಲಿ ಬರುವಾಗ ನೋಡಿದೆ. ಹಲವು ಕಡೆ ಬಿತ್ತನೆಯೇ ಆಗಿಲ್ಲ. ಬಿತ್ತನೆ ಆಗಿರುವ ಕಡೆಗಳಲ್ಲಿ 10-15% ಬೆಳೆ ಕೂಡ ರೈತರ ಕೈ ಸೇರುವುದಿಲ್ಲ” ಎಂದರು.

“ರೈತರ ಜಮೀನಿಗೆ ಹೋಗಿ ಹತ್ತಿ, ಕಡಲೆಕಾಯಿ, ಜೋಳ, ಸೂರ್ಯಕಾಂತಿ ಬೆಳೆ ವೀಕ್ಷಣೆ ಮಾಡಿದ್ದೇನೆ. ರೈತರಿಗೆ ಯಾವ ಪ್ರಮಾಣದಲ್ಲಿ ತೊಂದರೆ ಆಗುತ್ತಿದೆ ಎಂದು ಮನವರಿಕೆ ಆಗಿದೆ. ರೈತರೊಂದಿಗೆ ಚರ್ಚೆ ಮಾಡಿದ್ದು, ಅವರ ನೋವು ತಿಳಿಸಿದ್ದಾರೆ. ಜನ ವಲಸೆ ಹೋಗುವುದನ್ನು ತಪ್ಪಿಸಲು ವಿಬಿಜಿ ರಾಮ್ ಜಿ ಯೋಜನೆ ಹೇಗೆ ಸಹಾಯ ಆಗಬೇಕು ಎಂದು ತಿಳಿಸಿದ್ದಾರೆ” ಎಂದರು.

“ಈ ಜಿಲ್ಲೆಯಲ್ಲಿ ಗಜೇಂದ್ರಗಡ ಮಾತ್ರ ಬರ ಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಜಿಲ್ಲಾ ಮಂತ್ರಿಗಳ ನೇತೃತ್ವದಲ್ಲಿ ಎಲ್ಲಾ ಶಾಸಕರು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ” ಎಂದು ಹೇಳಿದರು.

“ಹೆಚ್ ಕೆ ಪಾಟೀಲ ಅವರು ಮೋಡ ಬಿತ್ತನೆ ವಿಚಾರವಾಗಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಅದೇ ರೀತಿ ಬೇರೆ ಶಾಸಕರು ಬೇರೆ ಬೇರೆ ವಿಚಾರವಾಗಿ ಗಮನ ಸೆಳೆದಿದ್ದಾರೆ. ನೀರಾವರಿ, ಬೆಣ್ಣೆ ಹಳ್ಳ ಸೇರಿದಂತೆ ಬೇರೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ. ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಈ ಯೋಜನೆಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.

ನಮ್ಮ ವರದಿ ಕೇಂದ್ರದ ವರದಿ ಹೊಂದಾಣಿಕೆ ಆಗಬೇಕು

“ನಮ್ಮ ವರದಿ ಕೇಂದ್ರದ ವರದಿ ಜತೆ ಹೊಂದಾಣಿಕೆ ಆಗಬೇಕು. ದೆಹಲಿಯಿಂದ ಬರುವ ಬರ ಅಧ್ಯಯನ ತಂಡಕ್ಕೆ ನಮ್ಮ ವರದಿ ಒಪ್ಪಿಗೆ ಆಗಬೇಕು. ಆಗ ಮಾತ್ರ ಕೇಂದ್ರ ಸರ್ಕಾರ ನೆರವು ನೀಡಲಿದೆ. ನಾವು ನಮ್ಮ ಕೈಲಾದ ಕ್ರಮ ಕೈಗೊಂಡಿದ್ದೇವೆ. ಕುಡಿಯುವ ನೀರಿನ ಪೂರೈಕೆ ಬಗ್ಗೆ ಸೂಚನೆ ನೀಡಲಾಗಿದೆ. ಕುಡಿಯುವ ನೀರಿಗೆ ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂ. ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹೆಚ್ಚುವರಿ ಹಣ ಇಡಲಾಗಿದೆ” ಎಂದು ವಿವರಿಸಿದರು.

“ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಚುರುಕಾಗಬೇಕು, ಜನ ತಮ್ಮ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಅಲೆದಾಡುವುದನ್ನು ತಪ್ಪಿಸಲು ಪ್ರಜಾಸೇವಾ ಆಂದೋಲನ ಸೆ. 5ರಿಂದ ಆರಂಭವಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ತಲುಪಬೇಕು. ದುರ್ಬಳಕೆ ಆಗಬಾರದು. ಅದಕ್ಕಾಗಿ ಮರುಪರಿಶೀಲನೆ ಹಾಗೂ ಪಂಚಾಯಿತಿ ಮಟ್ಟದ ಗ್ಯಾರಂಟಿ ಸಮಿತಿ ರಚಿಸುತ್ತಿದ್ದೇವೆ” ಎಂದರು.

“ನಮ್ಮ ಸರ್ಕಾರ 100 ದಿನಗಳಲ್ಲಿ ಏನೆಲ್ಲಾ ಮಾಡಿದೆ, ಮುಂದೆ ಏನು ಮಾಡಲಿದೆ ಎಂಬ ವಿಚಾರವಾಗಿ ಅಧಿವೇಶನದಲ್ಲಿ ತಿಳಿಸಲು ನಿರ್ಧರಿಸಿದ್ದೆ. ಆದರೆ ಅದಕ್ಕೆ ವಿರೋಧ ಪಕ್ಷದವರು ಅವಕಾಶ ನೀಡಲಿಲ್ಲ. 100 ದಿನಗಳ ಕಾರ್ಯಕ್ರಮ ವೇಳೆ ನಾನು ಈ ವಿಚಾರವನ್ನು ತಿಳಿಸುತ್ತೇನೆ” ಎಂದರು.

Related Articles

Back to top button