Latest

ಆರೇ ತಿಂಗಳಲ್ಲಿ 3ನೇ ಮುದ್ರಣ ಕಂಡ ಕಾದಂಬರಿ ಬಿಡುಗಡೆ ಸಮಾರಂಭ

ಪುಸ್ತಕ ಕುರಿತು ಮಾತುಕತೆ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಬೆಂಗಳೂರಿನ ಪ್ರಸಿದ್ಧ ಪುಸ್ತಕ ಮಳಿಗೆ ಹಾಗೂ ಆನ್ ಲೈನ್ ಕೃತಿ ಮಾರಾಟದಲ್ಲಿ ಮೊದಲ ಶ್ರೇಣಿಯ ದಾಖಲೆ ಮಾಡಿದ ಬರಹಗಾರ ಶಿವಾನಂದ ಕಳವೆಯವರ ಮಧ್ಯಘಟ್ಟ ಕಾದಂಬರಿ ಅರೇ ತಿಂಗಳಿನಲ್ಲಿ ಮೂರನೇ ಮುದ್ರಣವಾಗಿದೆ.

ಮಲೆನಾಡಿನ ಶತಮಾನದ ಸಾಮಾಜಿಕ ಇತಿಹಾಸ ದಾಖಲಿಸಿದ ಕೃತಿ ಇದಾಗಿದ್ದು ಶಿರಸಿಯ ನೆಮ್ಮದಿ ಕುಟೀರದಲ್ಲಿ ಜನವರಿ ೧೫ ರಂದು ಶುಕ್ರವಾರ ಸಾಯಂಕಾಲ ೪ ಗಂಟೆಗೆ ಬಿಡುಗಡೆ ಸಮಾರಂಭ ನಡೆಯಲಿದೆ.

Home add -Advt

ಬೆಂಗಳೂರಿನ ಸೆಲ್ಕೋ ಫೌಂಡೇಶನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಹೆಗಡೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು.

’ಕಾದಂಬರಿಯಲ್ಲಿ ಕಂಡ ಶತಮಾನದ ಮಹಿಳೆಯರ ಬದುಕು’ ಕುರಿತು ಖ್ಯಾತ ಕಥೆಗಾರ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ದೀಪ್ತಿ ಭದ್ರಾವತಿ, ’ಮಧ್ಯಘಟ್ಟದ ಕಣ್ಣಲ್ಲಿ ಮಲೆನಾಡಿನ ಜನಜೀವನ’ ಕುರಿತು ಹಿರಿಯ ಪತ್ರಕರ್ತ ಕಾಶ್ಯಪ ಪರ್ಣಕುಟಿ ಹಾಗೂ ’ಕಾಡಿನ ಕಥೆಗಳ’ ಕುರಿತು ಬರಹಗಾರ ಗಣಪತಿ ಬಾಳೇಗದ್ದೆ ಮಾತನಾಡುವರು.

ಕೇರಳದ ತುದಿಯಿಂದ ಶಿರಸಿಯ ಕಾಡು ಹಳ್ಳಿಗೆ ಹತ್ತು ದಿನಗಳ ಪರ್ಯಂತ ಒಂಬತ್ತು ನದಿ ದಾಟಿ ತಾಯಿಯ ಜೊತೆ ನಡೆದು ಬಂದ ಬಾಲಕ ವಾಸುದೇವ ಕಾದಂಬರಿ ಓದುಗರಿಗೆ ಚಿರಪರಿಚಿತರು. ಕಾದಂಬರಿ ಬಿಡುಗಡೆಯ ವಿಶೇಷ ಸಂದರ್ಭದಲ್ಲಿ ಕೃತಿಗೆ ಮೂಲ ಪ್ರೇರಣೆಯಾದ ವಾಸುದೇವ ಹೆಗಡೆ ಮತ್ತಿಘಟ್ಟ ಇವರನ್ನು ಗೌರವಿಸಲಾಗುತ್ತಿದೆ.

ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ, ನೆಮ್ಮದಿ ಬಳಗ ಶಿರಸಿ ಹಾಗೂ ಸುವರ್ಣ ಸಹ್ಯಾದ್ರಿ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯಾಭಿಮಾನಿಗಳು, ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ. ಈ ಸಂದರ್ಭದಲ್ಲಿ ಸಾಹಿತ್ಯ ಪ್ರಕಾಶನ ಪ್ರಕಟಿಸಿದ ಕಳವೆಯವರ ಎಲ್ಲ ಪುಸ್ತಕ ಪ್ರದರ್ಶನ ಹಾಗೂ ಮಾರಾಟವಿದೆ.

Related Articles

Back to top button