
ಅನಮೊಲ್ ತಂಗುಧಾಮದ ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತ ಶಾಸಕಿ
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಸಂತಿ ಬಸ್ತವಾಡದ ಶ್ರೀ ಸೆಂಟ್ ಸೆಬಾಸ್ಟಿಯನ್ ಚರ್ಚ್ಗೆ ಇಂದು ಸೌಹಾರ್ದಯುತ ಭೇಟಿ ನೀಡಿ, ಚರ್ಚ್ನ ಧರ್ಮಗುರುಗಳು ಹಾಗೂ ಆಡಳಿತ ಮಂಡಳಿ ಸದಸ್ಯರೊಂದಿಗೆ ವಿವಿಧ ವಿಷಯಗಳ ಕುರಿತು ಆತ್ಮೀಯವಾಗಿ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಚರ್ಚ್ ಆಡಳಿತ ಮಂಡಳಿಯ ವತಿಯಿಂದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಪ್ರೀತಿಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಚರ್ಚ್ನ ಧರ್ಮಗುರುಗಳೊಂದಿಗೆ ನಡೆದ ಮಾತುಕತೆಯಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳು, ಸ್ಥಳೀಯ ಸಮಸ್ಯೆಗಳು, ಸಮಾಜಮುಖಿ ಕಾರ್ಯಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು. ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಮತ್ತು ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯದ ಕುರಿತು ಲಕ್ಷ್ಮೀ ಹೆಬ್ಬಾಳಕರ್ ಅವರು ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಫಾದರ್ ಯುಸೆಬಿಯೋ ಫರ್ನಾಂಡೀಸ್, ಫಾದರ್ ಫ್ರಾಂಕಿ ಲೋಬೊ, ಸಿಸ್ಟರ್ ಅನಿತಾ ಶಾಂತಿ ಬಿ.ಎಸ್., ಸೆಬಾಸ್ಟಿಯನ್ ಗೊನ್ಸಾಲ್ವಿಸ್, ಜಸಿಂಟಾ ಫುರ್ಟ್ಯಾಡೋ, ಯುವರಾಜಣ್ಣ ಕದಂ, ಬಸಪ್ಪ ಬಿರಮುತ್ತಿ, ದಯಾನಂದ ಆರ್. ಎಚ್., ಜಾನ್ ಫರ್ನಾಂಡೀಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಅನಮೊಲ್ ತಂಗುಧಾಮಕ್ಕೆ ಭೇಟಿ
ಇದೇ ಸಂದರ್ಭದಲ್ಲಿ ಸಂತಿ ಬಸ್ತವಾಡದ ಸೆಂಟ್ ಸೆಬಾಸ್ಟಿಯನ್ ಚರ್ಚ್ ಆವರಣದಲ್ಲಿರುವ ಸೆಲೆಷಿಯನ್ ಸಿಸ್ಟರ್ಸ್ ಆಫ್ ಡಾನ್ ಬಾಸ್ಕೋ ಮರಿಯಾ ಕೃಪಾ ಸೊಸೈಟಿ ವತಿಯಿಂದ ನಡೆಸಲಾಗುತ್ತಿರುವ *‘ಅನಮೊಲ್ ತಂಗುಧಾಮ’*ಕ್ಕೂ ಲಕ್ಷ್ಮೀ ಹೆಬ್ಬಾಳಕರ್ ಅವರು ಭೇಟಿ ನೀಡಿದರು.
ಸಂಕಷ್ಟದಲ್ಲಿರುವ ಅನಾಥ ಹಾಗೂ ಆಶ್ರಯಹೀನ ಮಕ್ಕಳಿಗೆ ಆಶ್ರಯ, ಆರೈಕೆ, ಶಿಕ್ಷಣ ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಗತ್ಯವಾದ ವಾತಾವರಣ ಕಲ್ಪಿಸುತ್ತಿರುವ ಸಂಸ್ಥೆಯ ಸೇವಾ ಕಾರ್ಯವನ್ನು ಅವರು ಶ್ಲಾಘಿಸಿದರು.
ತಂಗುಧಾಮದಲ್ಲಿರುವ ಮಕ್ಕಳೊಂದಿಗೆ ಲಕ್ಷ್ಮೀ ಹೆಬ್ಬಾಳಕರ್ ಅವರು ಆತ್ಮೀಯವಾಗಿ ಬೆರೆತು, ಅವರೊಂದಿಗೆ ಕೆಲಕಾಲ ಪ್ರೀತಿಯಿಂದ ಸಂವಾದ ನಡೆಸಿದರು. ಮಕ್ಕಳ ಶಿಕ್ಷಣ, ಆರೋಗ್ಯ, ದಿನನಿತ್ಯದ ಅಗತ್ಯತೆಗಳು, ಅವರ ಆಸಕ್ತಿಗಳು ಹಾಗೂ ಭವಿಷ್ಯದ ಕುರಿತು ವಿಚಾರಿಸಿದರು. ಮಕ್ಕಳ ಕುಂದುಕೊರತೆಗಳು ಮತ್ತು ಕ್ಷೇಮಾಭಿವೃದ್ಧಿಯ ಬಗ್ಗೆ ಸಂಸ್ಥೆಯ ಮುಖ್ಯಸ್ಥರು ಹಾಗೂ ಸದಸ್ಯರಿಂದ ಮಾಹಿತಿ ಪಡೆದರು.
“ಸಂಕಷ್ಟದಲ್ಲಿರುವ ಮಕ್ಕಳಿಗೆ ಕೇವಲ ಆಶ್ರಯ ನೀಡುವುದಷ್ಟೇ ಅಲ್ಲ, ಅವರಿಗೆ ಪ್ರೀತಿ, ಭದ್ರತೆ, ಶಿಕ್ಷಣ ಹಾಗೂ ಆತ್ಮವಿಶ್ವಾಸದೊಂದಿಗೆ ಬದುಕು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸುವುದು ಅತ್ಯಂತ ಮಹತ್ವದ್ದು. ಪ್ರತಿಯೊಂದು ಮಗುವಿನ ಮುಖದಲ್ಲಿನ ನಗು ಮತ್ತು ಆತ್ಮವಿಶ್ವಾಸವೇ ನಮ್ಮ ಸಮಾಜದ ಉತ್ತಮ ಭವಿಷ್ಯದ ಸಂಕೇತ” ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಅನಮೊಲ್ ತಂಗುಧಾಮದಂತಹ ಸಂಸ್ಥೆಗಳು ಪೋಷಕರಿಲ್ಲದ ಹಾಗೂ ಆಶ್ರಯದ ಅಗತ್ಯವಿರುವ ಮಕ್ಕಳ ಬದುಕಿಗೆ ಆಸರೆಯಾಗುವ ಮೂಲಕ ಮಹತ್ವದ ಮಾನವೀಯ ಸೇವೆ ಸಲ್ಲಿಸುತ್ತಿವೆ. ಇಂತಹ ಸೇವಾ ಸಂಸ್ಥೆಗಳ ಕಾರ್ಯಕ್ಕೆ ಸಮಾಜದ ಎಲ್ಲ ವರ್ಗಗಳೂ ಕೈಜೋಡಿಸಬೇಕು. ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರು, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ತಂಗುಧಾಮದ ಕಾರ್ಯಚಟುವಟಿಕೆಗಳು ಮತ್ತು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಕೈಗೊಳ್ಳಲಾಗುತ್ತಿರುವ ವಿವಿಧ ಕಾರ್ಯಕ್ರಮಗಳ ಕುರಿತು ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಮಾಹಿತಿ ನೀಡಿದರು.




