*ಮಹಿಳೆ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಶವ ಎಸೆದಿದ್ದ ಪ್ರಿಯಕರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಶವ ಕಬ್ಬಿನ ಗದ್ದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಕೌಜಲಗಿ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಅನ್ನಪೂರ್ಣಾ ಸಿದ್ದಪ್ಪ ಒಡಚನ್ನವರ(34) ಮೂಲತ ಮಹಿಳೆ ತಿಗಡಿ ಗ್ರಾಮದವಳಾಗಿದ್ದು ಕೌಜಲಗಿ ಗ್ರಾಮದಲ್ಲಿ ಉಳುಮೆ ಮಾಡಿಕೊಡಿದ್ದರು. ನಾಪತ್ತೆಯಾಗಿರುವ ಕುರಿತು ಸುಮಾರು ಒಂದು ತಿಂಗಳ ಹಿಂದೆ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು.
ತನಿಖೆ ವೇಳೆ ಮಹಿಳೆ ಹಾಗೂ ಗೋಕಾಕ ತಾಲೂಕಿನ ಸಿಮ್ಲಾಪೂರದ ದಿಲೀಪ್ ಗಡ್ಕರಿ(37) ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾದ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಪೊಲೀಸ್ ತನಿಖೆಯ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಆರೋಪಿ ತನ್ನ ಗ್ರಾಮದಿಂದ ಪರಾರಿಯಾಗಿದ್ದ.
ನಂತರ ತನಿಖೆ ಮುಂದುವರಿಸಿದ ಪೊಲೀಸರು ತಲೆಮರೆಸಿಕೊಂಡದ್ದ ಆರೋಪಯನ್ನ ಪತ್ತೆಹಚ್ಚಿ, ಅಲ್ಲಿಗೆ ತೆರಳಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಯೂ ಅನ್ನಪೂರ್ಣನಳನ್ನು ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಶವವನ್ನು ಎಸೆದಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಮಹಿಳೆಯ ಮೈಮೇಲಿದ್ದ ಚಿನ್ನಾಭರಣಗಳು ತೆಗೆದುಕೊಂಡು, ಅವುಗಳನ್ನು ತನ್ನ ಬೈಕ್ನಲ್ಲಿ ಇಟ್ಟಿರುವುದಾಗಿ ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಆರೋಪಿಯ ಮಾಹಿತಿ ಆಧರಿಸಿ ಪೊಲೀಸರು ಕಬ್ಬಿನ ಗದ್ದೆಯಲ್ಲಿ ಶೋಧ ನಡೆಸಿದಾಗ ಮಹಿಳೆಯ ಶವ ಕೊಳೆತು ತೆಲೆ ಬುರುಡೆ, ಮೂಳೆಗಳು ಹಾಗೂ ಸೀರೆ, ಚಪಲಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನೆಯ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದಲ್ಲಿ ಕೊಲೆಗೆ ನಿಖರ ಕಾರಣವೇನು, ಚಿನ್ನಾಭರಣಗಳ ವಿಚಾರಕ್ಕೆ ಕೊಲೆ ನಡೆದಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



