ರಾಜಿನಾಮೆಗೆ ಮುಂದಾದ ಜೆಡಿಎಸ್ ಏಕೈಕ ಸಂಸದ ಪ್ರಜ್ವಲ್ ರೇವಣ್ಣ
ಪ್ರಗತಿವಾಹಿನಿ ಸುದ್ದಿ, ಹಾಸನ
ಜೆಡಿಎಸ್ ನ ಏಕೈಕ ಸಂಸದ ಪ್ರಜ್ವಲ ರೇವಣ್ಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು ನನ್ನಿಂದಾಗಿ ಅಜ್ಜ ಎಚ್.ಡಿ.ದೇವೇಗೌಡ ಸೋಲುವಂತಾಯಿತು. ಅಂತಹ ಹೋರಾಟಗಾರರಿಗೆ ಈ ಸ್ಥಿತಿ ಬರಬಾರದಿತ್ತು. ಅವರಿಗಾಗಿ ನಾನು ನನ್ನ ಸ್ಥಾನವನ್ನು ಬಿಟ್ಟುಕೊಡುತ್ತೇನೆ. ಇದು ತ್ಯಾಗವಲ್ಲ, ಅವರಿಗೆ ನೀಡುವ ಗೌರವ ಎಂದು ಪ್ರಜ್ವಲ್ ಹೇಳಿದರು.
ನಾನು ದೇವೇಗೌಡರನ್ನು ಭೇಟಿ ಮಾಡಿ ಮನವೊಲಿಸುತ್ತೇನೆ. ನಾನು ರಾಜಿನಾಮೆ ನೀಡಿ ಅವರು ಈ ಕ್ಷೇತ್ರದಿಂದ ಗೆಲ್ಲಲು ಅವಕಾಶ ಮಾಡಿಕೊಡುತ್ತೇನೆ. ನನ್ನ ಮನಸ್ಸಿಗೆ ಸಮಾಧಾನವಿಲ್ಲ ಎಂದು ಅವರು ಹೇಳಿದ್ದಾರೆ.
ಇಂದು ಪ್ರಜ್ವಲ್ ತಾಯಿ ಭವಾನಿ ರೇವಣ್ಣ ದೇವೇಗೌಡರನ್ನು ಭೇಟಿ ಮಾಡಿ ಕಣ್ಣೀರು ಹಾಕಿದ್ದಾರೆ. ನಿಮ್ಮ ಸೋಲಿಗೆ ನಾವು ಕಾರಣರಾದೆವು. ಇದನ್ನು ಸರಿಪಡಿಸಲು ಪ್ರಜ್ವಲ್ ರಾಜಿನಾಮೆ ನೀಡಲಿ. ನೀವು ಅಲ್ಲಿ ಸ್ಪರ್ಧಿಸಿ ಎಂದು ಭವಾನಿ ವಿನಂತಿಸಿದ್ದಾರೆ.
ಇಂದೇ ಪ್ರಜ್ವಲ್ ದೇವೇಗೌಡರನ್ನು ಭೇಟಿ ಮಾಡಲಿದ್ದಾರೆ.
ಆದರೆ ಈ ಬೆಳವಣಿಗೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಯಾವಾಗ ಬೇಕೋ ಆಗ ಸ್ಪರ್ಧಿಸುವುದು, ಬೇಕಾದಾಗ ರಾಜಿನಾಮೆ ನೀಡುವುದು ಮಾಡಲು ಇದೇನು ಅವರ ಕುಟುಂಬದ ಆಸ್ತಿಯೋ, ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅಣಕ ಎಂದು ಬಿಜೆಪಿ ಹೇಳಿದೆ.




