ಜೀರೋ ಟ್ರಾಫಿಕ್: ಗೃಹ ಸಚಿವರಿಗೆ ಹಿಗ್ಗಾಮುಗ್ಗಾ ತರಾಟೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು-
ರಾಜಿನಾಮೆ ನೀಡಿದ ಶಾಸಕರು ಸ್ಪೀಕರ್ ಭೇಟಿಯಾಗಲು ಬಂದ ಸಂದರ್ಭದಲ್ಲಿ ಜೀರೋ ಟ್ರಾಫಿಕ್ ನೀಡಿದ ವಿಷಯ ವಿಧಾನಸಭೆಯಲ್ಲಿ ಇಂದು ಸದನದ ಗಂಭೀರತೆಗೆ ಕಾರಣವಾಯಿತು.
ಶಾಸಕ ಎ.ಟಿ.ರಾಮಸ್ವಾಮಿ ಎತ್ತಿದ ಪ್ರಶ್ನೆಗೆ ಸ್ಪೀಕರ್ ರಮೇಶ ಕುಮಾರ ಗೃಹ ಸಚಿವ ಎಂ.ಬಿ.ಪಾಟೀಲ ಅವರಿಗೆ ವಿವರಣೆ ಕೇಳಿದರು.
ಎಂ.ಬಿ.ಪಾಟೀಲ ಎದ್ದುನಿಂತು, ಯಾವುದೇ ರೀತಿಯ ಜೀರೋ ಟ್ರಾಫಿಕ್ ಕೊಟ್ಟಿಲ್ಲ ಎಂದರು.
ಇದರಿಂದ ಕೆಂಡಾಮಂಡಲರಾದ ಸ್ಪೀಕರ್, ನಿಮ್ಮ ಮನಸ್ಸು ಒಪ್ಪುತ್ತಿದೆಯಾ ನೀವು ಹೇಳಿದ ಮಾತಿಗೆ? ನಿಮ್ಮ ಮನಸ್ಸಿಗೆ ಒಪ್ಪುತ್ತಾ ನೀವು ಕೊಟ್ಟ ಉತ್ತರಕ್ಕೆ? ಉತ್ತರ ಇಡೀ ದೇಶವೇ ನೋಡಿದೆ.
ಎಲ್ಲರಿಗೂ ಕೊಡಿ, ಅಪರಾಧಿಗಳಿಗೂ ಕೊಡಿ, ಸರಕಾರಿ ನೌಕರರಿಗೂ ಕೊಡಿ. ಒಂದು ಸಲ ಇಂತದಕ್ಕೆ ಅವಕಾಶ ಕೊಟ್ಟರೆ ಮುಂದೆ ಏನಾಗುತ್ತದೆ ಎನ್ನುವ ಕಲ್ಪನೆ ಇದೆಯಾ? ಹೇಗೆ ನಡೆಸುತ್ತೀರಿ ಸಮಾಜವನ್ನು ಮುಂದಕ್ಕೆ? ಜೀರೋ ಟ್ರಾಫಿಕ್ ಕೊಟ್ಟಿಲ್ಲ ಎಂದfರಲ್ಲ ನಿಮ್ಮ ಮನಸ್ಸಿಗೆ ಒಪ್ಪುತ್ತಾ ಎಂದು ಕಿಡಿಕಾರಿದರು.
ಈ ವೇಳೆ ಕಾಂಗ್ರೆಸ್ ನ ಎಚ್.ಕೆ.ಪಾಟೀಲ ಎದ್ದು ನಿಂತು, ಎಲ್ಲರೂ ನೋಡಿದ್ದಾರೆ. ಸದನದಲ್ಲಿ ಗೃಹಸಚಿವರು ಈ ರೀತಿ ಹೇಳುತ್ತಿದ್ದಾರೆ. ಇದು ಕ್ಲಿಯರ್ ಆಗಬೇಕು. ಹಾಗಾದರೆ ಯಾರು ಆದೇಶ ಕೊಟ್ಟಿದ್ದಾರೆ. ತಪ್ಪು ಉತ್ತರ ಕೊಟ್ಟಿದ್ದರೆ ಅದನ್ನು ಹಿಂದಕ್ಕೆ ಪಡೆಯಬೇಕು ಎಂದರು.
ಬಿಜೆಪಿಯ ಮಧುಸ್ವಾಮಿ, ಗೃಹ ಇಲಾಖೆಯನ್ನು ಯಾರು ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ನನಗೆೆ ಬಂದಿರುವ ಮಾಹಿತಿ ಪ್ರಕಾರ ಜೀರೋ ಟ್ರಾಫಿಕ್ ಕೊಟ್ಟಿಲ್ಲ. ಆದಾಗ್ಯೂ ನೀವು ಹೇಳುತ್ತಿರುವುದರಿಂದ ಈ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದು ತೇಪೆ ಹಚ್ಚುವ ಪ್ರಯತ್ನ ಮಾಡಿದರು ಗೃಹಸಚಿವರು.
ಆದರೂ ಸಮಾಧಾನಗೊಳ್ಳದ ಸ್ಪೀಕರ್ ಗೃಹ ಸಚಿವರಿಗೆ ಹಿಗ್ಗಾಮುಗ್ಗಾ ಜಾಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ