ಪ್ರಗತಿವಾಹಿನಿ ಸುದ್ದಿ, ಮುಂಬೈ – ಮುಂಬೈನ ಬೀದಿ ಬೀದಿಗಳಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧನೋರ್ವ ರೈಲ್ವೆ ಹಳಿ ದಾಟುವಾಗ ರೈಲು ಬಡಿದು ಸಾವಿಗೀಡಾಗಿದ್ದಾನೆ. 83 ವರ್ಷದ ಭಿಕ್ಷುಕನ ಹೆಸರು ಬೀರ್ ಚಂದ್.
ಸಮೀಪದಲ್ಲಿ ಗುಡಿಸಲಿನಲ್ಲಿ ಆತ ವಾಸವಾಗಿದ್ದ. ಆತ ಸಾವಿಗೀಡಾದ ನಂತರ ಪೊಲೀಸರು ಆತನ ಜೊತೆ ಕುಟುಂಬಸ್ಥರ್ಯಾರಾದರೂ ಇರಬಹುದು, ವಿಷಯ ತಿಳಿಸೋಣ ಎಂದು ಗುಡಿಸಲು ಹುಡುಕಿಕೊಂಡು ಹೋದರು. ಆದರೆ ಅಲ್ಲಿ ಯಾರೂ ಇರಲಿಲ್ಲ.
ನಂತರ ಗುಡಿಸಲು ಒಳಗೆ ಹೋಗಿ ಪರಿಶೀಲಿಸಿದಾಗ ಪೊಲೀಸರಿಗೆ ಒಂದರ ಮೇಲೊಂದು ಶಾಕ್. ಅಲ್ಲಿ ಇದ್ದ ಹಂಡೆಯೊಂದನ್ನು ಪರಿಶೀಲಿಸಿದಾಗ ಅದರಲ್ಲಿ ಚಿಲ್ಲರೆಗಳೇ ತುಂಬಿಕೊಂಡಿದ್ದವು. ಗಂಟೆಗಟ್ಟಲೆ ಶ್ರಮವಹಿಸಿ ಅದನ್ನು ಲೆಕ್ಕ ಮಾಡಿದಾಗ ಒಟ್ಟೂ ಮೊತ್ತ 1.77 ಲಕ್ಷ ರೂ. ಆಗಿತ್ತು.
ಇಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತು. ಗುಡಿಸಲನ್ನು ಪೂರ್ತಿಯಾಗಿ ಪರಿಶೀಲಿಸಿದಾಗ ಆತನ ಆಧಾರ ಕಾರ್ಡ್, ಪ್ಯಾನ್ ಕಾರ್ಡ್ ಮೊದಲಾದವು ಸಹ ಸಿಕ್ಕಿತು. ಅದರೊಂದಿಗೆ ಒಂದಿಷ್ಟು ಬ್ಯಾಂಕ್ ಡಿಪೋಸಿಟ್ ಸರ್ಟಿಫಿಕೇಟ್ ಗಳೂ ದೊರೆತವು. ಅದನ್ನು ಪರಿಶೀಲಿಸಿದಾಗ ಆತನ ಬ್ಯಾಂಕ್ ಠೇವಣಿ ಮೊತ್ತ 8.65 ಲಕ್ಷ ರೂ.
ಎಲ್ಲವನ್ನೂ ಪಂಚನಾಮೆ ಮಾಡಿ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಆತನ ಮೂಲ ಊರು ರಾಜಸ್ಥಾನ ಎಂದು ಪತ್ತೆ ಮಾಡಿ, ಅಲ್ಲಿ ಯಾರಾದರೂ ವಾರಸುದಾರರು ಇದ್ದಾರೋ ತಿಳಿದುಕೊಳ್ಳಲು ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಭಿಕ್ಷುಕ ಜೀವನ ಪೂರ್ತಿ ಭಿಕ್ಷೆ ಎತ್ತಿ ಗಳಿಸಿಟ್ಟ ಹಣ ಯಾರಾ ಪಾಲಾಗಲಿದೆಯೋ…
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ