*ಆರೋಗ್ಯಕರ ಜೀವನಕ್ಕೆ ಯೋಗಾಭ್ಯಾಸ ಸಹಕಾರಿ: ಸಂಸದ ಜಗದೀಶ್ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯೋಗ ಅಭ್ಯಾಸ ಸಾವಿರಾರು ವರ್ಷಗಳಿಂದ ಪಾಲಿಸುತ್ತಿರುವ ಆರೋಗ್ಯ ಸುಧಾರಣಾ ಕ್ರಮವಾಗಿದೆ. ಯೋಗದಿಂದ ಶಾರೀರಿಕ, ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಬಹುದು. ಜೀವನ ಶೈಲಿಯಲ್ಲಿ ಯೋಗವನ್ನು ಅಳವಡಿಸುವ ಮೂಲಕ ಆರೋಗ್ಯಕರ ಜೀವನ ರೂಪಿಸಿಕೊಳ್ಳಬಹುದು ಎಂದು ಸಂಸದ ಜಗದೀಶ್ ಶೆಟ್ಟರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಇತರೆ ಇಲಾಖೆಯ ಸಹಯೋಗದಲ್ಲಿ ಶನಿವಾರ (ಜೂ.21) ಸುವರ್ಣ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ “11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಬಾರಿ “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಘೋಷವಾಕ್ಯದೊಂದಿಗೆ ಪ್ರತಿಯೊಬ್ಬರಿಗೂ ಆರೋಗ್ಯ ಬಹು ಮುಖ್ಯ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಇಡೀ ವಿಶ್ವದಾದ್ಯಂತ ಯೋಗ ದಿನಾಚರಣೆ ಆಚರಿಲಾಗುತ್ತಿದೆ. 2014 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗ ದಿನಾಚರಣೆ ಜಾರಿಗೆ ತಂದರು. ಜಗತ್ತಿನ ಎಲ್ಲ ರಾಷ್ಟ್ರದಲ್ಲಿಯಲ್ಲಿ ಯೋಗ ದಿನಾಚರಣೆಯಲ್ಲಿ ಜನರು ಪಾಲ್ಗೊಳ್ಳುತ್ತಿದ್ದಾರೆ. ಆರೋಗ್ಯದಲ್ಲಿ ಉತ್ತಮ ಬದಲಾವಣೆ ತರುವ ನಿಟ್ಟಿನಲ್ಲಿ ಇಡೀ ಜಗತ್ತಿಗೆ ಯೋಗದ ಮಹತ್ವ ತಿಳಿಯಲಾಗಿದೆ ಎಂದು ಹೇಳಿದವರು.
ಯೋಗವು ಋಷಿಮುನಿಗಳ ಕಾಲದಿಂದಲೂ ಇತಿಹಾಸ ಹೊಂದಿದೆ. ಇದು ವೈದಿಕ ಕಾಲದಿಂದಲೂ ಬೆಳೆದುಬಂದಿದೆ, ಋಗ್ವೇದ ಮತ್ತು ಉಪನಿಷತ್ತುಗಳಲ್ಲಿ ಯೋಗಾಭ್ಯಾಸ ಉಲ್ಲೇಖಿಸಲಾಗಿದೆ.
ಯೋಗಾಭ್ಯಾಸದಿಂದ ಆರೋಗ್ಯ, ಮಾನಸಿಕ ಸಮತೋಲನ ಕಾಯ್ದುಕೊಳ್ಳಬಹುದು. ಪ್ರತಿಯೊಬ್ಬರು ದಿನನಿತ್ಯ ಯೋಗಾಭ್ಯಾಸ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಲೋಕಸಭಾ ಸಂಸದ ಜಗದೀಶ್ ಶೆಟ್ಟರ ಕರೆ ನೀಡಿದರು.
ಕೆ.ಎಲ್.ಇ ಪ್ರಭಾಕರ ಕೋರೆ ಆಸ್ಪತ್ರೆಯ ಯೋಗ ತರಬೇತಿದಾರ ಆರತಿ ಸಂಕೇಶ್ವರಿ ಅವರು ಯೋಗ ವಿವಿಧ ಆಸನಗಳ ಕುರಿತು ತರಬೇತಿ ನೀಡಿದರು.
ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ ಬೊರಸೆ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರಾದ ಸೌಮ್ಯ ಬಾಪಟ, ಏರ್ಫೋರ್ಸ್ ಲೆಪ್ಟಿನೆಂಟ್ ಕರ್ನಲ್ ನಿಖಿತಾ ಸಿಂಗ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್ ಸೊಬರದ,
ಜಿಲ್ಲಾ ಆಯುಷ್ ಅಧಿಕಾರಿ ಡಾ. ಶ್ರೀಕಾಂತ ಸುಣಧೋಳಿ, ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಯೋಗಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.