*ಗುಣಮಟ್ಟದ ಶಿಕ್ಷಣ-29 ಅಂಶಗಳ ಕಾರ್ಯಕ್ರಮ ಅನುಷ್ಠಾನ ಪರಿಶೀಲನೆಗೆ ಶಾಲಾ ಸಂದರ್ಶನ ಅಭಿಯಾನ: ಡಾ.ಈಶ್ವರ ಉಳ್ಳಾಗಡ್ಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಲಿಕಾ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳುವುದು ಹಾಗೂ ಇಲಾಖೆಯ ಮಹತ್ವದ ಕಾರ್ಯಕ್ರಮಗಳಾದ ಎಫ್.ಎಲ್.ಎನ್, ಎಲ್.ಬಿ.ಎ ಹಾಗೂ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ 29 ಅಂಶಗಳ ಕಾರ್ಯಕ್ರಮ ಅನುಷ್ಠಾನದ ಪ್ರಗತಿಯ ಪರಿವೀಕ್ಷಣೆ ಕಾರ್ಯ ಜಿಲ್ಲೆಯಲ್ಲಿ ಆರಂಭಿಸಲಾಗಿದೆ ಎಂದು ಬೆಳಗಾವಿ ವಿಭಾಗದ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳಗಾವಿ ವಿಭಾಗದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಲಿಕಾ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳುವುದು ಹಾಗೂ ಇಲಾಖೆಯ ಮಹತ್ವದ ಕಾರ್ಯಕ್ರಮಗಳಾದ ಎಫ್.ಎಲ್.ಎನ್, ಎಲ್.ಬಿ.ಎ ಹಾಗೂ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ 29 ಅಂಶಗಳ ಕಾರ್ಯಕ್ರಮ ಅನುಷ್ಠಾನದ ಪ್ರಗತಿಯನ್ನು ಪರಿವೀಕ್ಷಣೆ ಮಾಡಲು ಉಪನಿರ್ದೇಶಕರು (ಆಡಳಿತ) ಮತ್ತು ಉಪನಿರ್ದೇಶಕರು (ಅಭಿವೃದ್ಧಿ), ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರು, ಎಲ್ಲ ಮೇಲ್ವಿಚಾರಣಾಧಿಕಾರಿಗಳನ್ನು ಒಳಗೊಂಡಂತೆ ಜಿಲ್ಲಾ ಹಂತದಲ್ಲಿ 7 ಮತ್ತು ತಾಲ್ಲೂಕು ಹಂತದಲ್ಲಿ 7 ಸಂದರ್ಶನ ತಂಡಗಳನ್ನು ರಚಿಸಲಾಗಿದೆ.
ಬೆಳಗಾವಿ ಜಿಲ್ಲೆಗೆ 56, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ 63, ಧಾರವಾಡ ಜಿಲ್ಲೆಗೆ 56, ಗದಗ ಜಿಲ್ಲೆಗೆ 49, ಹಾವೇರಿ ಜಿಲ್ಲೆಗೆ 56, ಉತ್ತರಕನ್ನಡ ಜಿಲ್ಲೆಗೆ 42, ಶಿರಸಿ ಜಿಲ್ಲೆಗೆ 49 ಮತ್ತು ವಿಜಯಪುರ ಜಿಲ್ಲೆಗೆ 56 ತಂಡಗಳನ್ನು ರಚಿಸಲಾಗಿದೆ.
ಒಟ್ಟಾರೆ ಬೆಳಗಾವಿ ವಿಭಾಗದಲ್ಲಿ 476 ತಂಡಗಳನ್ನು ರಚಿಸಲಾಗಿದೆ. 1171 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು, 1906 ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂದರ್ಶನ ಅಭಿಯಾನ ಆರಂಭಗೊಂಡಿದ್ದು, ನವೆಂಬರ್-30ರವರೆಗೆ ಜರುಗಲಿದೆ. ಸಂದರ್ಶನ ತಂಡಗಳು ಪ್ರತಿದಿನ ಶಾಲೆಗಳಿಗೆ ಸಂದರ್ಶನ ನೀಡಿ ಶಾಲೆಯಲ್ಲಿನ ಪ್ರತಿ ತರಗತಿಯ, ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯ ಕಲಿಕಾ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಲು ಆದೇಶ ನೀಡಲಾಗಿದೆ ಎಂದು ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಿಕೊಳ್ಳುವುದು ಹಾಗೂ ನಿರಂತರವಾಗಿ ವಿದ್ಯಾರ್ಥಿ ಕಲಿಕೆಯನ್ನು ಅನುಪಾಲನೆ ಮಾಡುವುದು ಇದರ ಪ್ರಮುಖ ಉದ್ದೇಶ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಮಾಡಲು 29 ಅಂಶಗಳ ಕಾರ್ಯಕ್ರಮ ಅನುಷ್ಠಾನದಲ್ಲಿವೆ.
ಮದ್ಯಾಹ್ನ ಉಪಹಾರ ಯೋಜನೆ ಮತ್ತು ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದ ಸಮರ್ಪಕ ಅನುಷ್ಠಾನ, ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಗುರುತಿಸುವಿಕೆ, ಶಾಲೆಯಲ್ಲಿ ಮಕ್ಕಳ ಸುರಕ್ಷತೆಗೆ ಕೈಗೊಂಡ ಕ್ರಮಗಳು ಸೇರಿದಂತೆ ಶಾಲೆಯಲ್ಲಿನ ಮಕ್ಕಳ ಕಲಿಕಾ ಪ್ರಗತಿ ಮತ್ತು ಶಿಕ್ಷಕರ ಬೋಧನಾ ಚಟುವಟಿಕೆಗಳನ್ನು ಸಂದರ್ಶನ ತಂಡಗಳು ಪರಿಶೀಲನೆ ಮಾಡುವಂತೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದು, ಪ್ರತಿದಿನ ವಿಭಾಗದಲ್ಲಿ ತಂಡಗಳ ಸಂದರ್ಶನದ ವರದಿಯನ್ನು ಪರಿಶೀಲಿಸುವರು.
ಸಂದರ್ಶನದಿಂದ ಶಾಲೆಗಳಲ್ಲಿನ ಕಲಿಕಾ ಪ್ರಗತಿಯ ಮಾಹಿತಿ ಲಭ್ಯವಾಗಲಿದ್ದು, ಶಾಲಾ ಶಿಕ್ಷಣ ಸುಧಾರಣೆಗಾಗಿ ಮತ್ತು ವಿದ್ಯಾರ್ಥಿಗಳ ಕಲಿಕೆಯ ಫಲ ಸಂವರ್ಧನೆಗೆ ಅಗತ್ಯ ಕ್ರಿಯಾಯೋಜನೆಯನ್ನು ತಯಾರಿಸಿ ಪ್ರತಿ ವಿದ್ಯಾರ್ಥಿಯು ಮೂಲಭೂತ ಕಲಿಕಾ ಸಾಮರ್ಥ್ಯಗಳನ್ನು ಸಾಧಿಸುವಂತೆ ಕ್ರಮವಹಿಸುವುದರ ಜೊತೆಗೆ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಶೇಕಡಾ 100ರಷ್ಟು ಸಾಧಿಸಲು ಶಾಲಾ ಸಂದರ್ಶನ ಅಭಿಯಾನದಿಂದ ಸಹಾಯಕವಾಗಲಿದೆ.
ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಸಂಬಂಧಿಸಿದ ಯಾವುದೇ ಅಹವಾಲುಗಳಿದ್ದರೆ ಪಾಲಕರು ಸಂದರ್ಶನ ತಂಡದೊಂದಿಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಬೆಳಗಾವಿ ವಿಭಾಗದ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



