*ಸಮುದಾಯ ಭವನಗಳು ಒಳ್ಳೆಯ ಕಾರ್ಯಗಳಿಗೆ ಅನುಕೂಲವಾಗಲಿ: ಈರಣ್ಣ ಕಡಾಡಿ*

ಪ್ರಗತಿವಾಹಿನಿ ಸುದ್ದಿ: ಹಳ್ಳಿಗಳಲ್ಲಿ ನಿರ್ಮಿಸುವ ಸಮುದಾಯ ಭವನಗಳು ಎಲ್ಲ ಸಮುದಾಯ ಹಬ್ಬ ಹರಿದಿನಗಳು, ಮದುವೆ, ಸೀಮಂತ, ನಾಮಕರಣ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಉಪಯೋಗವಾಗುವ ಮೂಲಕ ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕೆ ಕಾರಣವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ನ-23 ರಂದು ಅರಭಾವಿ ವಿಧಾನಸಭಾ ಮತಕ್ಷೇತ್ರದ ಯಾದವಾಡ ಗ್ರಾಮದ ಬಳಿಗಾರ ಒಣಿಯ ಶ್ರೀ ಲಿಂಗ ಬಸವೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಯಾದವಾಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಈಗಾಗಲೇ ರಾಜ್ಯಸಭಾ ಸಂಸದರ ನಿಧಿಯಿಂದ ಲಿಂಗ ಬಸವೇಶ್ವರ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ, ಮೈಲಾರಲಿಂಗ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ, ಘಟಗಿ ಬಸವೇಶ್ವರ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ, ಕೊಪದಟ್ಟಿ ಗ್ರಾಮದ ನಿಂಗಮ್ಮಾದೇವಿ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ, ಕೊಪದಟ್ಟಿ ಗ್ರಾಮದಲ್ಲಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ 5 ಲಕ್ಷ ರೂ. ಒಟ್ಟು ಯಾದವಾಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 35 ಲಕ್ಷ ರೂ.ಗಳ ಅನುದಾನವನ್ನು ನೀಡಿದ್ದೇನೆ. ನನ್ನ ಸೇವಾಧಿಯಲ್ಲಿ ಎಷ್ಟು ಸಾಧ್ಯವೊ ಅಷ್ಟು ಜನರಿಗೆ ರಾಜ್ಯಸಭಾ ಸಂಸದರ ಅನುದಾನವನ್ನು ಮುಟ್ಟಿಸುವಂತಹ ಪ್ರಾಮಾಣಿಕ ಪ್ರಯತ್ನ ಮುಂದುವರೆಯಲಿದೆ ಎಂದರು.
ಯಾದವಾಡ ಗ್ರಾಮದ ಅಭಿವೃದ್ದಿಯಲ್ಲಿ ನಾನು ಕೂಡಾ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ಅದೇ ರೀತಿ ಬರುವಂತಹ ದಿನಗಳಲ್ಲಿ ಯುವಕರ ಅನುಕೂಲಕ್ಕಾಗಿ ಗ್ರಾಮದಲ್ಲಿ ಒಂದು ಓಪ್ ಜಿಮ್ ಸೌಲಭ್ಯ ಒದಗಿಸಿ ಕೊಡಲು ನಾನು ಪ್ರಯತ್ನಿಸುತ್ತಿದ್ದೇನೆ, ಇನ್ನೂ ಹೆಚ್ಚು ಸೇವೆಯನ್ನು ಮಾಡಲು ನಾನು ಸಿದ್ದನಿದ್ದೇನೆ, ತಾವು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಕೊಪದಟ್ಟಿ ಗ್ರಾಮದಲ್ಲಿ ಸಂಸದರ ನಿಧಿಯಿಂದ ನಿರ್ಮಾಣಗೊಂಡ ಬಸ್ ಪ್ರಯಾಣಿಕರ ತಂಗುದಾಣದ ಉದ್ಗಾಟನೆ ನೇರವೇರಿಸಿದರು.
ಪೂಜ್ಯ ಶ್ರೀ ಚೌಕೇಶ್ವರ ವಿಶ್ವಾರಾಧ್ಯ ಸ್ವಾಮಿಜಿಗಳು ಸಾನಿಧ್ಯ ವಹಿಸಿದ್ದರು. ಪ್ರಮುಖರಾದ ಶ್ರೀಶೈಲ ಪೂಜೇರಿ, ಬಸವರಾಜ ಹಿಡಕಲ್, ಹಣಮಂತ ಹುಚ್ಚರಡ್ಡಿ, ವಿಠ್ಠಲ ಕಲ್ಲಮುಡಿ, ರಾಮನಗೌಡ ಪಾಟೀಲ, ಅಮೀನಸಾಬ ಯಳ್ಳೂರ, ನಿಂಗಪ್ಪ ಅರಿಕೇರಿ, ಈಶ್ವರ ಬಾಗಿ, ರವಿ ಅಮರಾಣಿ, ಪ್ರಕಾಶ ಹಿಡಕಲ್, ಬಸಪ್ಪ ಮುದ್ದಾಪೂರ, ಭೀರಪ್ಪ ಪೂಜೇರಿ, ಮುಪ್ಪಯ್ಯ ಹಿರೇಮಠ ಕೊಪದಟ್ಟಿ ಗ್ರಾ.ಪಂ ಸದಸ್ಯ ಗೋವಿಂದ ಉದಪುಡಿ, ಶಿವಲಿಂಗಪ್ಪ ಹುಬ್ಬಳ್ಳಿ, ಬಿ.ಎಚ್. ಪಾಟೀಲ, ಶ್ರೀನಿವಾಸ ಸಿದ್ದಾಪೂರ, ಆನಂದ ರೂಗಿ, ಹಣಮಂತ ಮೂಲಿ, ಈಶ್ವರಪ್ಪ ಬಾಗಿ, ವೆಂಕಟೇಶ ದಾಸರ, ಚೇತನ ಹೆಗ್ಗಳಗಿ, ನವಿನ ತಾವಂಶಿ, ಮುದಕಣ್ಣ ಗಾಣಿಗೇರ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



