*ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: 10 ವರ್ಷಗಳಿಂದ ಸರಪಳಿಯಲ್ಲಿ ಕಟ್ಟಿ ಹಾಕಿ ಮಗಳನ್ನು ಗೃಹ ಬಂಧನದಲ್ಲಿಟ್ಟ ಪೋಷಕರು*

ಪ್ರಗತಿವಾಹಿನಿ ಸುದ್ದಿ: ಆಧುನಿಕವಾಗಿ, ಶೈಕ್ಷಣಿಕವಾಗಿ ಪ್ರಪಂಚ ಎಷ್ಟೇ ಮುಂದುವರೆದರೂ ರಾಜ್ಯದ ಕೆಲ ಜಿಲ್ಲೆ ಹಾಗೂ ಗ್ರಾಮಗಳಲ್ಲಿ ಮೌಡ್ಯಾಚರಣೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಬೆಳಗಾವಿಯಲ್ಲಿನ ಈ ಅಮಾನವೀಯ ಘಟನೆ ಸಾಕ್ಷಿಯಾಗಿದೆ.
ಕಳೆದ 10 ವರ್ಷಗಳಿಂದ ಪೋಷಕರು ಸ್ವಂತ ಮಗಳನ್ನೇ ಕೈಗೆ ಸರಪಳಿ ಕಟ್ಟಿ ಗೃಹ ಬಂಧನದಲ್ಲಿಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾನಾಮತಿ ಭಯದಿಂದ ಹೆತ್ತ ಮಗಳನ್ನೇ ತಂದೆ ಸಿದ್ರಾಯ ಗೃಹ ಬಂಧನದಲ್ಲಿಟ್ಟಿದ್ದಾರೆ. 10 ವರ್ಷಗಳ ಹಿಂದೆ ಮಗಳು ಸ್ನೇಹಾ ಎಲ್ಲರಂತೆ ಕಾಲೇಜಿಗೆ ಹೋಗುತ್ತಿದ್ದಳು. ಕಾಲೇಜಿಗೆ ಹೋಗುತ್ತಿದ್ದಾಗ ಸ್ನೇಹಾಗೆ ಯಾರೋ ಬಾನಾಮತಿ ಮಾಡಿಸಿದ್ದಾರೆ. ಅಂದಿನಿಂದ ಸ್ನೇಹಾ ವಿಚಿತ್ರವಾಗಿ ಡ್ಯಾನ್ಸ್ ಮಾಡೋದು, ಚಿತ್ರ ವಿಚಿತ್ರವಾಗಿ ಆಡೋದು ಮಾಡಲಾರಂಭಿಸಿದ್ದಾಳೆ.
ಮಗಳು ಹುಚ್ಚಿಯಂತೆ ವರ್ತಿಸುತ್ತಿದ್ದು, ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆಕೆಯನ್ನು ಗೃಹಬಂಧನದಲ್ಲಿರಸಲಾಗಿದೆ ಎಂದು ಆಕೆಯ ತಂದೆ ತಿಳಿಸಿದ್ದಾರೆ. ಸ್ನೇಹಾಗೆ ಬಾನಾಮತಿಯಾಗಿದೆ ಎಂದು ಸ್ವಾಮೀಜಿಯೊಬ್ಬರು ಹೇಳಿದ್ದಾರಂತೆ. ಬಾನಾಮತಿ ತೆಗೆಯಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ ಎಂದಿದ್ದಾರೆ. ಹಾಗಾಗಿ ನಾವು ಮಗಾನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದೇವೆ. ಸರಪಳಿ ಬಿಚ್ಚಿದರೆ ಕಲ್ಲು ಎಸೆಯುವುದು, ಹೊಡೆಯುವುದು, ಓಡಿ ಹೋಗುವುದು ಮಾಡುತ್ತಾಳೆ. ನಮ್ಮ ಮೂವರು ಮಕ್ಕಳ ಪೈಕಿ ಓರ್ವ ಮಗಳ ಸ್ಥಿತಿ ಹೀಗಾಗಿದೆ. ಆದ್ದರಿಂದ ಅನಿವಾರ್ಯವಾಗಿ ಮಗಳನ್ನು ಗೃಹಬಂಧನದಲ್ಲಿ ಇಟ್ಟಿದ್ದೇವೆ ಎಂದು ಸ್ನೇಹಾ ತಂದೆ ಸಿದ್ರಾಯ ಅಳಲು ತೋಡಿಕೊಂಡಿದ್ದಾರೆ.
ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಾನಸಿಕ ಸಮಸ್ಯೆಗೆ ಮನೋವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸುವುದನ್ನು ಬಿಟ್ಟು ಬಾನಾಮತಿ ಹೆಸರಲ್ಲಿ ಮಗಳನ್ನು ಕಟ್ಟಿಹಾಕಿ ಕಳೆದ 10 ವರ್ಷಗಳಿಂದ ಗೃಹಬಂಧನದಟ್ಟು ಶಿಕ್ಷಿಸುತ್ತಿರುವುದು ದುರಂತವೇ ಸರಿ.




