
ಪ್ರಗತಿವಾಹಿನಿ ಸುದ್ದಿ: 4500 ಕೋಟಿ ಹಗರಣದ ಆರೋಪಿ ಶಿವಾನಂದ ನಿಲಣ್ಣವರ ಅವರನ್ನು ನ್ಯಾಯಾಲಯವು ನಿನ್ನೆಯಷ್ಟೇ ಹತ್ತು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಮಹತ್ವದ ಆದೇಶ ಹೊರಡಿಸಿತ್ತು. ಅದರ ಬೆನ್ನೆಲೆ ಇಂದು ಬೆಳಗಾವಿಯಿಂದ ನೇರವಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.
ಬೆಳಗಾವಿಯನ್ನಷ್ಟೇ ಅಲ್ಲದೆ ಇಡೀ ರಾಜ್ಯವನ್ನೇ ನಡುಗಿಸಿದ್ದ 4,500 ಕೋಟಿ ರೂಪಾಯಿ ವಂಚನೆ ಪ್ರಕರಣದ ತನಿಖೆ ಈಗ ಮತ್ತಷ್ಟು ತೀವ್ರಗೊಂಡಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿದ್ದ ಆರೋಪಿ ಶಿವಾನಂದ ನೀಲಣ್ಣವರ್ನನ್ನು ಸಿಐಡಿ ಅಧಿಕಾರಿಗಳ ತಂಡ ಬಿಗಿ ಭದ್ರತೆಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೊರಟಿದೆ.
ಬೆಳಗಾವಿಯಲ್ಲಿ ಮಾಡಬೇಕಿದ್ದ ಪ್ರಾಥಮಿಕ ಹಂತದ ವಿಚಾರಣೆ ಮತ್ತು ತನಿಖೆ ಕಂಪ್ಲೇಟ್ ಆಗುತ್ತಿದ್ದಂತೆ, ಅಧಿಕಾರಿಗಳು ಮುಂದಿನ ಪ್ಲಾನ್ ರೆಡಿ ಮಾಡಿಕೊಂಡಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಹಗರಣದ ಆಳ-ಅಗಲ ತಿಳಿಯಬೇಕಾದರೆ ಬೆಂಗಳೂರಿನಲ್ಲೇ ಹೈವೋಲ್ವೇಜ್ ವಿಚಾರಣೆ ನಡೆಸಬೇಕು ಎಂದು ಅಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಸಿಐಡಿ ಅಧಿಕಾರಿಗಳು ಎರಡು ಪ್ರತ್ಯೇಕ ವಾಹನಗಳಲ್ಲಿ ಬೆಂಗಳೂರಿನತ್ತ ಸಾಗುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ. ಮೊದಲನೇ ವಾಹನದಲ್ಲಿ ಕೇವಲ ಆರೋಪಿ ಶಿವಾನಂದ ನೀಲಣ್ಣವರ್ನನ್ನು ಕೂರಿಸಿಕೊಂಡು ಬರಲಾಗುತ್ತಿದ್ದರೆ, ಎರಡನೇ ವಾಹನದಲ್ಲಿ ಈ ಹಗರಣದಲ್ಲಿ ಜಪ್ತಿ ಮಾಡಲಾದ ನೂರಾರು ಮಹತ್ವದ ದಾಖಲೆಗಳು, ಕಂಪ್ಯೂಟರ್ಗಳು, ಲ್ಯಾಪ್ಟಾಪ್ಗಳು, ಪೆನ್ಡ್ರೈವ್ ಹಾಗೂ ಮೊಬೈಲ್ ಫೋನ್ಗಳನ್ನು ಈ ವಾಹನದಲ್ಲಿ ಬೆಂಗಳೂರಿಗೆ ತರಲಾಗುತ್ತಿದೆ. ಈ ಡಿಜಿಟಲ್ ಸಾಕ್ಷ್ಯಗಳೇ ಆರೋಪಿಯ ಭವಿಷ್ಯವನ್ನು ನಿರ್ಧರಿಸಲಿವೆ.
ನ್ಯಾಯಾಲಯವು ನಿನ್ನೆಯಷ್ಟೇ ಆರೋಪಿ ಶಿವಾನಂದನನ್ನು ಹತ್ತು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಮಹತ್ವದ ಆದೇಶ ಹೊರಡಿಸಿತ್ತು. ಕೋರ್ಟ್ನಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಅಲರ್ಟ್ ಆದ ಅಧಿಕಾರಿಗಳು, ಕಾಲಹರಣ ಮಾಡದೆ ಬೆಂಗಳೂರಿನ ಮುಖ್ಯ ಕಚೇರಿಯಲ್ಲಿ ವಿಚಾರಣೆ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ.



