
ಪ್ರಗತಿವಾಹಿನಿ ಸುದ್ದಿ: ಕಿರುತೆರೆ ಹಾಗೂ ರಂಗಭೂಮಿಯ ಹಿರಿಯ ನಟ ವಿಜಯಕುಮಾರ್ ಜಿತೂರಿ ಅವರು ವಿಧಿವಶರಾಗಿದ್ದಾರೆ.
ಹುಟ್ಟೂರಾದ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ಸೋಮವಾರ ಸಂಜೆ ನಿಧನರಾಗಿದ್ದಾರೆ. ಕಿರುತೆರೆ ಜೊತೆಗೆ ಹಿರಿತೆರೆ, ರಂಗಭೂಮಿಯಲ್ಲಿ ಅವರು ನಟಿಸಿ ಗಮನ ಸೆಳೆದಿದ್ದರು. ಅವರ ಸಾವಿಗೆ ಕಲಾವಿದರು ಕಂಬನಿ ಮಿಡಿದಿದ್ದಾರೆ.
‘ಮಂಗಳ ಗೌರಿ ಮದುವೆ’ ಧಾರಾವಾಹಿ ಮೂಲಕ ಹೆಸರು ಮಾಡಿದ್ದ ಇವರು, ಕೊನೆಯ ದಿನಗಳಲ್ಲಿ ನಟನೆಗೆ ಸರಿಯಾಗಿ ಅವಕಾಶಗಳಿಲ್ಲದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ.
ವಿಜಯಕುಮಾರ್ ಜಿತೂರಿ ಅವರು ಕೇವಲ ನಟ ಮಾತ್ರ ಅಲ್ಲ ಗಾಯಕ ಕೂಡ ಆಗಿದ್ದರು. ಕಲಾ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಆದಾಗ್ಯೂ ಅವಕಾಶಗಳಿಲ್ಲದೇ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು.




