*ಗಣೇಶ ಉತ್ಸವ: ಪಾಲಿಕೆ ಮೇಯರ್, ಆಯುಕ್ತರಿಂದ ಸಿದ್ಧತೆ ಪರಿಶೀಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಆಯುಕ್ತರು ಗುರುವಾರ ಬೆಳಿಗ್ಗೆ ನಗರ ಸಂಚಾರ ಮಾಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಇದಕ್ಕೂ ಮೊದಲು ಗಣಪತಿ ಮೂರ್ತಿಗಳನ್ನು ವಿಸರ್ಜಿಸುವ ಕಪಿಲೇಶ್ವರ ಹೊಂಡದ ಆವರಣದಲ್ಲಿ ಮೇಯರ್, ನಗರ ಸೇವಕರು ಹಾಗೂ ಆಯುಕ್ತರು ಪೂಜೆ ಸಲ್ಲಿಸಿ ಸಿದ್ಧತೆಗಳಿಗೆ ಚಾಲನೆ ನೀಡಿದರು.
ನಂತರ ಗಣೇಶ ಮೂರ್ತಿಗಳು ಸಾಗುವ ಮೆರವಣಿಗೆ ಮಾರ್ಗಗಳಾದ ಚೆನ್ನಮ್ಮ ವೃತ್ತ, ಸಮಾದೇವಿ, ಮಾರುತಿ, ಗಣಪತಿ, ರಾಮಲಿಂಗ ಖಿಂಡ್ ಗಲ್ಲಿಗಳು, ಸಂಭಾಜಿ, ತಿಲಕ್, ಹೇಮು ಕಲಜಿ ಚೌಕ್ ಗಳು, ಮಾರ್ಕೆಟ್ ಸೇರಿದಂತೆ ಮುಂತಾದ ಮಾರ್ಗಗಳ ಪರಿಶೀಲನೆ ನಡೆಸಿ ಮಾತನಾಡಿದ ಮೇಯರ್ ಪ್ರೀತಿ ಕಾಮಕರ್ ಅವರು, ಎಲ್ಲ ರಸ್ತೆಗಳ ಗುಂಡಿ ಮುಚ್ಚುವುದು, ಸ್ವಚ್ಛತೆ, ವಿದ್ಯುತ್ ಲೈನ್ಗಳು ಮುಂತಾದ ವ್ಯವಸ್ಥೆಗಳನ್ನು ಮಾಡಲು ಎಲ್ ಅಂಡ್ ಟಿ ಹೆಸ್ಕಾಂ ಸೇರಿದಂತೆ ಎಲ್ಲ ಇಲಾಖೆಗಳವರಿಗೆ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಿ ಸಿದ್ಧತೆ ಮಾಡಿಕೊಡಬೇಕೆಂದು ಸೂಚಿಸಲಾಗಿದ್ದು, ಕೆಲಸ ಭರದಿಂದ ಸಾಗಿದೆ.
ಯಾವುದೇ ಅನಾನುಕೂಲತೆಗಳಾಗದಂತೆ ಗಣೇಶ ಉತ್ಸವವನ್ನು ಎಲ್ಲರೂ ಸೇರಿ ವಿಜ್ರಂಭಣೆಯಿಂದ ಆಚರಿಸೋಣ ಎಂದು ಹೇಳಿದರು.
ಆಯುಕ್ತ ಕಾರ್ತಿಕ್ ಎಂ. ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ನಿರ್ಣಯಿಸಿದಂತೆ ಸಮಸ್ಯೆಗಳನ್ನು ಬಗೆಹರಿಸಿ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಹಾಗೂ ವಿವಿಧ ಇಲಾಖೆಗಳಿಂದ ಮಾಡಬೇಕಾದ ಎಲ್ಲ ಕಾರ್ಯಗಳನ್ನು ನಿಗದಿತ ಅವಧಿಯಲ್ಲಿ ಮುಗಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೇಯಸ್ ನಾಕಾಡಿ, ರಾಜು ಭಾತಕಂಡೆ, ನಿತಿನ್ ಜಾಧವ್, ಗಿರೀಶ ಧೋಂಗಡಿ, ಆನಂದ ಚೌಹಾಣ್, ರೇಷ್ಮಾ ಕಾಮಕರ, ವೈಶಾಲಿ ಭಾತ ಕಂಡೆ ಸೇರಿದಂತೆ ಇತರೇ ನಗರ ಸೇವಕರು, ಅಭಿವೃದ್ಧಿ ವಿಭಾಗದ ಉಪ ಆಯುಕ್ತೆ ಲಕ್ಷ್ಮೀ ಸುಳಗೇಕರ್ ಸೇರಿದಂತೆ ಪಾಲಿಕೆಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




