Karnataka NewsLatest

ಕರ್ನಾಟಕ – ಮಹಾರಾಷ್ಟ್ರ ಗಡಿಭಾಗದಲ್ಲಿ  ಹೈ ಅಲರ್ಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೋವಿಡ್-೧೯ ತಡೆಗಟ್ಟುವ ಹಿನ್ನೆಲೆಯಲ್ಲಿ ಚಿಕ್ಕೋಡಿಯ ಉಪವಿಭಾಗಧಿಕಾರಿ ರವೀಂದ್ರ ಕಲಿಂಗನ್ನವರ ಬೋರಗಾಂವ ಚೆಕ್ ಪೋಸ್ಟಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು ಕರ್ನಾಟಕ – ಮಹಾರಾಷ್ಟ್ರದ ಗಡಿಭಾಗದಲ್ಲಿರುವ  ಬೋರಗಾಂವ ಪಟ್ಟಣದಲ್ಲಿ  ಚೆಕ್ ಪೋಸ್ಟ್ ನಿರ್ಮಿಸಿದ್ದು, ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯಕ್ಕೆ ಬರುವಂತಹ ವಾಹನಗಳ ಸಂಚಾರ  ನಿಷೇಧಿಸಲಾಗಿದೆ ಹಾಗೂ ಕರ್ನಾಟಕ ರಾಜ್ಯದ ಜನರನ್ನು ಮಹಾರಾಷ್ಟ್ರ ರಾಜ್ಯಕ್ಕೆ ತೆರಳದಂತೆ  ತಡೆ ಹಿಡಿಯಲಾಗುತ್ತಿದೆ. ಮಹಾರಾಷ್ಟ್ರ ರಾಜ್ಯದದಲ್ಲಿ ಕೋವಿಡ್-೧೯  ಸೋಂಕಿನ ಪ್ರಕರಣಗಳು ದಿನದಿಂದ ದಿನ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಹೇಳಿದರು.
 ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗಡೆಗೆ ಪ್ರಯಾಣಿಸಬಾರದು ನಿಯಮ‌ ಉಲ್ಲಂಘಿಸಿ ಪ್ರಯಾಣ‌ ಮಾಡಿದರೆ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲು ಚೆಕ್ ಪೋಸ್ಟನಲ್ಲಿರುವ ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು‌.
 ಈ ಚೆಕ್ ಪೋಸ್ಟನಲ್ಲಿ  ಬೋರಗಾಂವ  ಪ್ರಾಥಮಿಕ  ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಗಳು ಹಾಗೂ ಸದಲಗಾ ಪೋಲಿಸ್ ಠಾಣೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಬೋರಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಗಳಾದ ಡಾ. ಬೆಣ್ಣಿ ಮಾತನಾಡಿ,
 ಕೋವಿಡ್ ೧೯ ಬಗ್ಗೆ ಭಯ ಬೇಡ, ಏಚ್ಚರಿಕೆ  ಇರಲಿ ಸಾರ್ವಜನಿಕರು ಮನೆಯಿಂದ ಹೊರಗಡೆಗೆ ಹೊಗುವಾಗ  ಮುನ್ನೆಚ್ಚರಿಕೆಯಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರಗಳನ್ನು ಬಳಕೆ ಮಾಡಬೇಕೆಂದು  ಸಲಹೆಗಳನ್ನು ನೀಡಿದರು.
ಚೆಕ್ ಪೋಸ್ಟ್ ನಲ್ಲಿ ಸ್ಕೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು ದಿನಬಳಕೆಗೆ ಅವಶ್ಯಕವಿರುವಂತಹ ತರಕಾರಿ, ಹಾಲಿನ ಹಾಗೂ ದಿನಸಿ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ದಿನದ  ೨೪*೭ ಎಲ್ಲ ವಾಹನಗಳ ಮೇಲೆ ನಿಗಾ ವಹಿಸಲಾಗುತ್ತಿದ್ದು, ವಾಹನದಲ್ಲಿರುವ  ಚಾಲಕರು ಹಾಗೂ ಕ್ಲಿನರ್ಗಳಿಗೆ  ಸ್ಕ್ರೀನಿಂಗ್  ಮುಖಾಂತರ ಪರೀಕ್ಷೆ ಮಾಡಲಾಗುತ್ತಿದೆ.
ಸಾರ್ವಜನಿಕರು ತಾತ್ಕಾಲಿಕವಾಗಿ ಪ್ರವಾಸಗಳನ್ನು ರದ್ದು ಮಾಡಬೇಕು ಕೋವಿಡ್  ೧೯ ಪ್ರಕರಣಗಳು ತಡೆಗಟ್ಟಲು ಸಾರ್ವಜನಿಕರು ಸ್ಪಂದಿಸಬೇಕು, ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಿದರೆ ಇದನ್ನು ನಿಯಂತ್ರಿಸಲು ಸಾಧ್ಯ ಎಂದು ಮಾಹಿತಿ ನೀಡಿದರು.
 ಪಟ್ಟಣದಲ್ಲಿ ಧ್ವನಿವರ್ಧಕ ಮತ್ತಿತರ ಪರಿಕರಗಳನ್ನು ಬಳಸಿಕೊಂಡು ಸೋಂಕಿನ ಕುರಿತು ಮುಂಜಾಗ್ರತೆ ತೆಗೆದುಕೊಳ್ಳಬೇಕಾದ  ಕ್ರಮಗಳು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಕುರಿತು ಜನಜಾಗೃತಿ ಮಾಡಿಸಲಾಗುತ್ತಿದ್ದು ಜನರು ಈ ಎಲ್ಲ ನಿಯಮಗಳನ್ನು ಪಾಲನೆ‌ಮಾಡಬೇಕೆಂದು ಅವರು ತಿಳಿಸಿದರು.
 ಈ ಸಂದರ್ಭದಲ್ಲಿ ಚಿಕ್ಕೋಡಿಯ ಉಪವಿಭಾಗಾಧಿಕಾರಿ ರವೀಂದ್ರದ ಕರಲಿಂಗನ್ನವರ,  ತಹಶಿಲ್ದಾರ ಸುಭಾಶ ಸಂಪಗಾವಿ, ಸಿ.ಪಿ.ಐ ಆರ್.ಆರ್ ಪಾಟೀಲ,  ಬೋರಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ  ಡಾ. ಎಸ್ ಬೆಣ್ಣಿ, ಸದಲಗಾ ಪೋಲಿಸ ಸಬ್ ಇನ್ಸ್ಪೆಕ್ಟರ್ ಅನಿಲ ಕುಂಬಾರ ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button