
ಪ್ರಗತಿವಾಹಿನಿ ಸುದ್ದಿ; ಹರಿಯಾಣ: ಕೃಷಿ ಕಾಯ್ದೆ ವಿರೋಧಿಸಿ ಅನ್ನದಾತ ಮತ್ತೆ ಸಿಡಿದೆದ್ದಿದ್ದು, ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ಉತ್ತರಾಖಂಡ್ ರೈತರು ಕೇಂದ್ರ ಸರ್ಕಾರದ ಕೃಷಿ ನೀತಿ ಖಂಡಿಸಿ ಟ್ರ್ಯಾಕ್ಟರ್, ಟ್ರಕ್ ಸಮೇತ ದೆಹಲಿಯತ್ತ ಹೊರಟಿದ್ದು, ಮಾರ್ಗ ಮಧ್ಯೆ ಪೊಲೀಸರು ಹಾಗೂ ರೈತರ ಮಧ್ಯೆ ಸಂಘರ್ಷ ನಡೆದಿದೆ.
ರಾಷ್ಟ್ರ ರಾಜಧಾನಿಯತ್ತ ಮುನ್ನುಗ್ಗಿದ್ದ ರೈತರನ್ನು ಹರ್ಯಾಣದ ಬ್ರಿಡ್ಜ್ ಮಧ್ಯೆಯೇ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಸಾವಿರಾರು ರೈತರು ಬ್ಯಾರಿಕೇಡ್ ಗಳನ್ನು ನದಿಗೆ ಎಸೆದು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಪೊಲೀಸರು ಹಾಗೂ ರೈತರ ನಡುವೆ ಘರ್ಷಣೆ ಏರ್ಪಟ್ಟಿದೆ.
ಎರಡು ಗಂಟೆಗೂ ಹೆಚ್ಚು ಸಮಯ ಬ್ರಿಡ್ಜ್ ಮೇಲೆ ಪೊಲೀಸರು ಹಾಗೂ ರೈತರ ನಡುವೆ ಜಟಾಪಟಿ ನಡೆದು, ಅಂತಿಮವಾಗಿ ಪೊಲೀಸರು ರೈತರ ಮೇಲೆ ಜಲಫಿರಂಗಿ ಪ್ರಯೋಗ ಮಾಡಿ ಚದುರಿಸುವ ಕೆಲಸ ಮಾಡಿದ್ದಾರೆ. ಪೊಲೀಸರು ಹಾಗೂ ರ್ಯಾಲಿ ಹೊರಟ ರೈತರ ನಡುವೆ ಹೈಡ್ರಾಮಾ ನಡೆದಿದೆ.