Belagavi NewsBelgaum News
*ಬೆಳಗಾವಿ: ಮಕ್ಕಳ ಮಾರಾಟ ಪ್ರಕರಣದಲ್ಲಿ ರಕ್ಷಿಸಲ್ಪಟ್ಟಿದ್ದ 30 ದಿನಗಳ ಹಸುಗೂಸು ಸಾವು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ನಡೆದಿದ್ದ ಮಕ್ಕಳ ಮಾರಾಟ ಪ್ರಕರಣದಲ್ಲಿ ರಕ್ಷಿಸಲ್ಪಟ್ಟಿದ್ದ ಒಂದು ತಿಂಗಳ ಕಂದಮ್ಮ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಿತ್ತೂರು ಮೂಲದ ನಕಲಿ ವೈದ್ಯ ಅಬ್ದುಲ್ ಗಾಫರ್ ಲಡಾಖಾನ್ ಎಂಬಾತ ಮಕ್ಕಳ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಈತನಿಂದ ಮಹಾದೇವಿ ಎಂಬ ನರ್ಸ್ 30 ದಿನಗಳ ಹೆಣ್ಣುಮಗುವನ್ನು ಖರೀದಿಸಿ, ಬೆಳಗಾವಿಗೆ ಬಂದು ಮಾರಾಟ ಮಾಡಿದ್ದಳು. ಹೀಗೆ ಮಗು ಮಾರುವಾಗ ಮಹಾದೇವಿಯನ್ನು ಪೊಲೀಸರು ಬಂಧಿಸಿದ್ದರು.
ಶಿಶುವಿನ ಬೆಳವಣಿಗೆ ಕುಂಠಿತ, ತೂಕ ಹೆಚ್ಚಳವಾಗದೇ ಅನಾರೋಗ್ಯದಿಂದ ಬಳಲುತ್ತಿದ್ದ ಕಂದಮ್ಮನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಆರೈಕೆ ಮಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಈಗ ಮಗು ಮೃತಪಟ್ಟಿದೆ.
ಪೊಲೀಸರು ಕಂದಮ್ಮನ ತಂದೆ-ತಾಯಿ ಸಮ್ಮುಖದಲ್ಲಿ ಬೆಳಗಾವಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.


