ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ನ್ಯಾಯಾಧೀಶರಾದ ಎನ್ ವಿ ರಮಣ ಅವರು ಮುಖ್ಯ ನ್ಯಾಯಮೂರ್ತಿಗಳ ಕುಟುಂಬದ ಆಪ್ತರು ಎಂದು ಸಿಜೆಐ ವಿರುದ್ಧ ಆರೋಪ ಮಾಡಿದ್ದ ಮಹಿಳೆ ಸುಪ್ರೀಂ ಕೋರ್ಟ್ ಗೆ ಪತ್ರ ಬರೆದ ಹಿನ್ನೆಲೆಯಲ್ಲಿ ತನಿಖೆಗಾಗಿ ರಚಿಸಲಾಗಿದ್ದ ಆಂತರಿಕ ಸಮಿತಿಯಿಂದ ನ್ಯಾಯಾಧೀಶ ರಮಣ ಅವರು ನಿರ್ಗಮಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಕೇಳಿಬಂದಿದ್ದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಂತರಿಕ ಸಮಿತಿ ರಚಿಸಲಾಗಿತ್ತು. ಆದರೆ ರಮಣ ಗೊಗೊಯ್ ಕುಟುಂಬಕ್ಕೆ ಹತ್ತಿರದವರು. ಹಾಗಾಗಿ ಸಮಿತಿಯಿಂದ ಕೈಬಿಡಬೇಕು. ಇಲ್ಲವಾದರೆ ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಸಮಿತಿಯಲ್ಲಿ ಮಹಿಳಾ ನ್ಯಾಯಾಧೀಶರು ಹೆಚ್ಚು ಮಂದಿ ಇರಬೇಕು ಎಂದು ದೂರುದಾರ ಮಹಿಳೆ ತಕರಾರು ತೆಗೆದಿದ್ದರು.
ಸುಪ್ರೀಂ ಕೋರ್ಟ್ನ ಎಲ್ಲ ನ್ಯಾಯಾಧೀಶರು ಸಭೆ ಸೇರಿ (ಮುಖ್ಯನ್ಯಾಯಮೂರ್ತಿಯನ್ನು ಹೊರತುಪಡಿಸಿ) ಸಿಜೆಐ ವಿರುದ್ಧ ಆರೋಪ ಕುರಿತಾಗಿ ತನಿಖೆಗೆ ಆಂತರಿಕ ಸಮಿತಿಯನ್ನು ರಚಿಸಿದ್ದರು.
ರಂಜನ್ ಗಗೊಯ್ ಅವರ ಬಳಿಕ ಹಿರಿಯ ನ್ಯಾಯಾಧೀಶರಾದ ಎಸ್ ಎ ಬೊಬ್ಡೆ ಅವರ ನೇತೃತ್ವದಲ್ಲಿ ಓರ್ವ ಮಹಿಳಾ ಸದಸ್ಯೆ ಸೇರಿದಂತೆ ಮೂವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಮೂರನೆಯವರಾಗಿ ನ್ಯಾಯಾಧೀಶರಾದ ಇಂದಿರಾ ಬ್ಯಾನರ್ಜಿ ಅವರು ಸಮಿತಿಯಲ್ಲಿದ್ದರು.
ಸಿಜೆಐ ವಿರುದ್ಧದ ಆರೋಪದ ಪ್ರಕರಣದ ವಕಾಲತ್ತು ವಹಿಸಿರುವ ಹಿರಿಯ ಮಹಿಳಾ ವಕೀಲರಾದ ಇಂದಿರಾ ಜೈ ಸಿಂಗ್ ಅವರು ನ್ಯಾಯಮೂರ್ತಿ ರಮಣ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಸುಪ್ರೀಂ ಕೋರ್ಟ್ ಮಾಜಿ ಮಹಿಳಾ ನೌಕರರೊಬ್ಬರು ಕಳೆದ ವಾರ ಸಿಜೆಐ ವಿರುದ್ಧ ಆರೋಪ ಮಾಡಿ ಹಲವು ನ್ಯಾಯಾಧೀಶರಿಗೆ ಅಫಿಡವಿಟ್ ಸಲ್ಲಿಸಿದ್ದರು. ಆರೋಪಗಳನ್ನು ತಳ್ಳಿಹಾಕಿದ್ದ ಸಿಜೆಐ, ನ್ಯಾಯಾಂಗದ ಸ್ವಾತಂತ್ರ್ಯ ಅಪಾಯದಲ್ಲಿದೆ. ವ್ಯವಸ್ಥೆಯನ್ನು ಬಲಿಪಶು ಮಾಡಲಾಗಿದೆ. ಆರೋಪಗಳ ಹಿನ್ನೆಲೆಯಲ್ಲಿ ಭಾರಿ ಸಂಚು ಅಡಗಿದೆ ಎಂದು ಪ್ರತಿಕ್ರಿಯಿಸಿದ್ದರು.
ಸುಪ್ರಿಂ ಮುಖ್ಯ ನ್ಯಾಯಾಧೀಶರ ವಿರುದ್ದವೇ ಲೈಂಗಿಕ ಕಿರುಕುಳ ಆರೋಪ