Belagavi NewsBelgaum NewsKannada NewsKarnataka News

ದೇಶ ಮೊದಲು, ದೇಶ ಪ್ರಗತಿಗೆ ಅಹರ್ನಿಶಿ ಶ್ರಮಿಸೋಣ: ಡಾ.ಪ್ರಭಾಕರ ಕೋರೆ


ಕೆಎಲ್‌ಇ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಮ್ಮ ಹಿರಿಯರು, ಅಸಂಖ್ಯ ಹೋರಾಟಗಾರರು ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರು. ಅವರು ಸದಾ ಸ್ಮರಣೀಯರು. ಅವರೆಲ್ಲರನ್ನೂ ಸ್ಮರಿಸುವ ದಿನವಿಂದು ಎಂದು ಕೆಎಲ್‌ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಳೆದ ಎಪ್ಪತ್ತಾರು ವರ್ಷಗಳಲ್ಲಿ ಭಾರತ ಅಗಾಧವಾದ ಸಾಧನೆಯನ್ನು ಮಾಡಿದೆ. ಜಗತ್ತು ಇಂದು ಭಾರತದತ್ತ ಹೊರಳಿ ನೋಡುವಂತೆ ವಿಕಾಸದ ಪಥದಲ್ಲಿ ಮುನ್ನಡೆದಿದೆ. ಪರಕೀಯ ಆಳ್ವಿಕೆಯಲ್ಲಿ ನಾವು ಬಡತನ ರೇಖೆಯ ಕೆಳಗೆ ಇದ್ದೆವು. ಇಂದು ಸ್ಥಿತಿ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಭಾರತ ಪ್ರಕಾಶಿಸುತ್ತಿದೆ. ನಮ್ಮೆಲ್ಲ ಜನನಾಯಕರು ಪಕ್ಷಾತೀತವಾಗಿ ದೇಶವನ್ನು ಕಟ್ಟುವಕೆಲಸ ಮಾಡಬೇಕಾಗಿದೆ. ಇಂದು ಆರೋಗ್ಯ-ಶಿಕ್ಷಣ-ಕೃಷಿ-ಸಂಶೋಧನಾ ಕ್ಷೇತ್ರದಲ್ಲಿ ಅನನ್ಯವಾಗಿ ಸಾಧಿಸಿದ್ದೇವೆ. ಅದು ಮತ್ತಷ್ಟು ವಿಸ್ತರಿಸಬೇಕಾಗಿದೆ. ನಮ್ಮ ಯುವಜನಾಂಗದಲ್ಲಿ ದೇಶಾಭಿಮಾನವನ್ನು ಮೂಡಿಸುವ ಕೆಲಸ ನಡೆಯಬೇಕು. ದೇಶ ಮೊದಲು ಎಂಬ ಪ್ರಜ್ಞೆ, ಅಸ್ಮೀತೆ ಇಂದಿನ ಅಗತ್ಯವೆಂದು ಹೇಳಿದರು.

Home add -Advt

ಸಾಧಕ ವಿದ್ಯಾರ್ಥಿಗಳಿಗೆ ಡಾ.ಪ್ರಭಾಕರ ಕೋರೆಯವರಿಂದ ಅಭಿನಂದನೆ
ರಾಷ್ಟ್ರೀಯ ಸಾಧನೆ ಮಾಡಿ, ಅಗಸ್ಟ್ ೨೨ ರಿಂದ ಮಧ್ಯಪ್ರದೇಶದ ಮಾವೋದಲ್ಲಿ ಜರುಗಲಿರುವ ರಾಷ್ಟ್ರಮಟ್ಟದ ಜಿ.ವಿ.ಮಾಲ್ವಂಕರ ಶೂಟಿಂಗ್ ಚಾಂಪಿಯನ್‌ಶಿಫ್‌ಗೆ ಆಯ್ಕೆಯಾದ ಸಿನಿಯರ್ ಕೆಡೆಟ್ ಪ್ರೀತಿ ಚಂದ್ರಶೇಖರಯ್ಯ ಸವದಿ ಹಾಗೂ ಸಿನಿಯರ್ ಕೆಡೆಟ್ ಗುರುನಾಥ ಲಕ್ಷ್ಮಣ ರಾಜೋಳಿ ಇವರನ್ನು ಡಾ.ಪ್ರಭಾಕರ ಕೋರೆಯವರು ಅಭಿನಂದಿಸಿದರು.

ಅಂತೆಯೇ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ಸತತ ೮ನೇ ಸಲ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡು ಲಿಂಗರಾಜ ಕಾಲೇಜಿನ ಕ್ರೀಡಾ ವಿಭಾಗದ ವಿದ್ಯಾರ್ಥಿಗಳನ್ನು, ಬೆಳಗಾವಿ, ಹುಬ್ಬಳ್ಳಿ, ಅಂಕಲಿ ಹಾಗೂ ಧಾರವಾಡ ಕೇಂದ್ರಗಳಲ್ಲಿ ಜರುಗಿದ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ೪ನೇ ಸಲ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದು ವಿದ್ಯಾರ್ಥಿಗಳಿಗೆ ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಎನ್‌ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ, ದೈನಿಕ ನಿರ್ದೇಶಕ ಡಾ.ಸಿ.ರಾಮರಾವ್, ಎನ್‌ಎಸ್‌ಎಸ್ ಅಧಿಕಾರಿ ಡಾ.ಎಚ್.ಎಂ. ಚನ್ನಪ್ಪಗೋಳ, ಸಾಂಸ್ಕೃತಿಕ ವಿಭಾಗದ ಸಂಯೋಜಕರಾದ ಡಾ.ರೇಣುಕಾ ಕಠಾರಿ ಉಪಸ್ಥಿತರಿದ್ದರು.

Related Articles

Back to top button