Kannada NewsLatest

‘ಯುವ ಭಾರತದ ದನಿ’ ರಾಷ್ಟ್ರೀಯ ಭಾಷಣ ಸ್ಪರ್ಧೆಗೆ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ‘ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ನೇತೃತ್ವದಲ್ಲಿ ದೇಶ, ವಿದೇಶಗಳಲ್ಲಿನ ಪ್ರಸ್ತುತ ವಿಷಯಗಳ ಕುರಿತು ರಾಷ್ಟ್ರೀಯ ಭಾಷಣ ( ಯುವ ಭಾರತದ ದನಿ) ಎಂಬ ವಿನೂತನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ’ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಸುರಭಿ ಧ್ವಿವೇದಿ ತಿಳಿಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಲಿತರ ದನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದರಿಂದ ದೇಶದ ಯುವಕರಿಗೆ ಎಚ್ಚರಿಸುವ ಉದ್ದೇಶದಿಂದ ದೇಶ, ವಿದೇಶದಲ್ಲಿ ಪ್ರಸ್ತುತ ವಿಷಯಗಳ ಕುರಿತು ಭಾಷಣ ಸ್ಪರ್ಧೆಯನ್ನು ನಡೆಸಲಾಗುತ್ತಿದೆ ಎಂದರು.

‘ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ವಯೋಮಿತಿ ನಿಗದಿ ಮಾಡಲಾಗಿದ್ದು, 18 ರಿಂದ 35 ವರ್ಷದೊಳಗಿನವರು ಆನ್ ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಸ್ಪರ್ಧೆಗೆ ಪಾಲ್ಗೊಳ್ಳುವವರು https://forms.gle/JykwXusa8n7y9vg7 ಫಾರ್ಮ ತುಂಬಿ ಕಳಿಸುವುದು ಕಡ್ಡಾಯವಾಗಿರುತ್ತದೆ. ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ನಡೆಸಲಾಗುವುದು, ಅದರಲ್ಲಿ 5 ಜನ ವಿಜೇತರನ್ನು ಜಿಲ್ಲಾ ವಕ್ತಾರರಾಗಿ ನೇಮಕ ಮಾಡಿ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ಬಳಿಕ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆಸಿ 10 ಜನ ವಿಜೇತರನ್ನು ರಾಜ್ಯ ವಕ್ತಾರರಾಗಿ ನೇಮಿಸಲಾಗುವುದು. ತದನಂತರ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಕೊನೆಗೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮ ದಿನವಾದ ನವೆಂಬರ್ 14ರಂದು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಯನ್ನು ನ್ಯೂ ಡೆಲ್ಲಿದಲ್ಲಿ ಏರ್ಪಡಿಸಲಾಗುವುದು’ ಎಂದು ಹೇಳಿದರು.

Home add -Advt

ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಐದು ಜನರನ್ನು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಅವರು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಕಮಾಡಿ , ಹೆಸರು ಪ್ರಕಟಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ ಪಾಟೀಲ, ಉಪಾಧ್ಯಕ್ಷ ಮೃಣಾಲ ಹೆಬ್ಬಾಳ್ಕರ್, ಚಿಕ್ಕೋಡಿ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಯಲ್ಲಪ್ಪ ಶಿಂಗೆ, ಉಪಾಧ್ಯಕ್ಷ ಸಿದ್ಧಿಕ ಅಂಕಲಗಿ, ಜಿಲ್ಲಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸೈಪ್ ಅಲಿ ಶೇಠ, ಉಪಾಧ್ಯಕ್ಷ ಪವನ ರಾಠೋಡ, ಉಸ್ತುವಾರಿಗಳಾದ ಅಬ್ದುಲ ದೇಸಾಯಿ, ಭರತ ನಾಯ್ಕ, ಸಯದ್ ಕಾಲಿದಹ್ಮದ, ಭರತ ನಾಯ್ಕ ಸೇರಿದಂತೆ ಇತರರು ಇದ್ದರು.

ಬಳಿಕ ಬೆಳಗಾವಿ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ , ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ , ನಗರ ಯುವ ಕಾಂಗ್ರೆಸ್ ಪದಾಧಿಕಾರಿಗಳ ಕಾರ್ಯಕಾರಣಿ ಸಭೆ ನಡೆಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಸಿಎಂ ಸರಣಿ ಕಾರ್ಯಕ್ರಮ -ಇಲ್ಲಿದೆ ಸಂಪೂರ್ಣ ವಿವರ

Related Articles

Back to top button