Kannada NewsLatest
ಆಶ್ರಮದಲ್ಲಿನ ವೃದ್ದರನ್ನು ಸಂತೈಸಿದ ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗುರುವಾರ ಸಂಜೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುಟ್ಟಲವಾಡಿ ಗ್ರಾಮದ ಶಾಂತಾಯಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದ್ದರು.
ಅದೊಂದು ಭಾವನಾತ್ಮಕ ಕ್ಷಣ… ಅಲ್ಲಿಯ ವೃದ್ದರನ್ನು ಸಂತೈಸಿದರು… ಅವರ ಯೋಗಕ್ಷೇಮ ವಿಚಾರಿಸಿದರು… ಅವರ ಕಥೆ ಕೇಳಿ ಮರುಗಿದರು… ವೃದ್ದಾಶ್ರಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪರಿಸ್ಥಿತಿಯನ್ನು ವೀಕ್ಷಿಸಿದರು…
ವೃದ್ದಾಶ್ರಮದ ಹೊಸ ಕಟ್ಟಡದ ಸ್ಲ್ಯಾಬ್ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕಿ ಹೆಬ್ಬಾಳಕರ್, ಅಲ್ಲಿನ ರಸ್ತೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಈ ವೃದ್ದಾಶ್ರಮವು ನೊಂದ ಜೀವಿಗಳಿಗೆ ಸಂಜೀವಿನಿಯಾಗಿದ್ದು, ವೃದ್ದಾಶ್ರಮಕ್ಕೆ ತಮ್ಮಿಂದಾದ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ವಿಜಯ ಮೊರೆ, ಯುವರಾಜ ಕದಂ, ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ನಾಗೇಶ ಚೌಹಾಣ ಮೊದಲಾದವರು ಉಪಸ್ಥಿತರಿದ್ದರು.




