Kannada NewsKarnataka News
ನದಿಯಲ್ಲಿ ಬಿದ್ದ 13 ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನದಿ ದಾಟುವ ವೇಳೆ 13 ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ನದಿಯಲ್ಲಿ ಮಗುಚಿಬಿದ್ದ ದುರ್ಘಟನೆ ಸಂಭವಿಸಿದೆ.
ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಅದೆ ರೀತಿ ಘಟಪ್ರಭಾ ನದಿ ಕೂಡಾ ತುಂಬಿ ಹರಿಯುತ್ತಿದೆ. ಇಂದು ಬೆಳಗ್ಗೆ 13 ಜನರು ಅವರಾದಿಯಿಂದ ನಂದಗಾಂವ್ ಗೆ ಟ್ರ್ಯಾಕ್ಟರ್ ಮೇಲೆ ಕುಳಿತುಕೊಂಡು ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಘಟಪ್ರಭಾ ನದಿ ದಾಟಿಕೊಂಡು ಕೂಲಿ ಕೆಲಸಕ್ಕೆ ಹೋಗಬೇಕಿತ್ತು. ಆದರೆ ಈ ವೇಳೆ ಟ್ರೈಲರ್ ಸಮೇತ ಟ್ರ್ಯಾಕ್ಟರ್ ನದಿಯಲ್ಲಿ ಮಗುಚಿ ಬಿದ್ದಿದೆ. 13 ಜನರಲ್ಲಿ 12 ಜನರು ಈಜಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಓರ್ವ ಕಣ್ಮರೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ನೀರಲ್ಲಿ ಕಣ್ಮರೆಯಾಗಿರುವ ಓರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳಕ್ಕೆ ಕುಲಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.




