20 ಲಕ್ಷ ಗಡಿ ದಾಟಿದ ಕೊರೊನಾ; ಕೇಂದ್ರದ ವಿರುದ್ಧ ರಾಹುಲ್ ಕಿಡಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಲಕ್ಷದ ಗಡಿ ದಾಟಿದ್ದು, ಸೋಂಕು ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ದೇಶದಲ್ಲಿ ಗುರುವಾರ ಸಂಜೆ ವೇಳೆಗೆ ಕೊರೊನಾ ಪ್ರಕರಣ 20 ಲಕ್ಷ ದಾಟಿದೆ. ದೇಶದಲ್ಲಿ 13.70 ಲಕ್ಷ ಮಂದಿ ಗುಣಮುಖರಾಗುತ್ತಿದ್ದಾರೆ. ಆದರೆ ನರೇಂದ್ರ ಮೋದಿ ಸರ್ಕಾರ ನಾಪತ್ತೆಯಾಗಿದೆ ಎಂದು ಟ್ವಿಟರ್ ನಲ್ಲಿ ಕೇಂದ್ರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಕಳೆದ ಜುಲೈ 17ರಂದು ದೇಶದಲ್ಲಿ ಕೊರೊನಾ ಸೋಂಕು ಇಷ್ಟೇ ತೀವ್ರವಾಗಿ ಹರಡುತ್ತಿದ್ದರೆ ಆಗಸ್ಟ್ 10ರೊಳಗೆ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 20 ಲಕ್ಷದ ಗಡಿ ದಾಟಲಿದೆ ಎಂದು ಭವಿಷ್ಯ ನುಡಿದಿದ್ದರು. ಕೊರೋನಾ ಎಂಬ ಮಹಾಮಾರಿ ತಂದೊಡ್ಡುವ ಅಪಾಯಗಳು ಅಂದಾಜಿಗೂ ನಿಲುಕಲಾರದಂತಿವೆ. ತಕ್ಷಣವೇ ಕೇಂದ್ರ ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಇದೀಗ ಸೋಂಕು ಶರವೇಗದಲ್ಲಿ ಹೆಚ್ಚಿದ್ದು, 20 ಲಕ್ಷ ದಾಟಿರುವುದು ಆತಂಕವನ್ನು ಹೆಚ್ಚಿಸಿದೆ.



