Belagavi NewsBelgaum NewsKannada NewsKarnataka NewsLatest

*ಐರನ್‌ಮ್ಯಾನ್ ಸವಾಲು ಗೆದ್ದ ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತೀಚೆಗೆ ಬೆಳಗಾವಿ ಉತ್ತರ ವಲಯದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ಆಗಿ ನೇಮಕಗೊಂಡಿರುವ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರು ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಪ್ರಸಿದ್ಧ “ಐರನ್‌ಮ್ಯಾನ್ 70.3 ವೆಸ್ಟರ್ನ್ ಸಿಡ್ನಿ–2026” ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಮತ್ತೊಮ್ಮೆ ತಮ್ಮ ಅಪಾರ ಸಹಿಷ್ಣುತೆ ಮತ್ತು ದೃಢಸಂಕಲ್ಪವನ್ನು ಸಾಬೀತುಪಡಿಸಿದ್ದಾರೆ.

ಈ ಸಾಧನೆಯೊಂದಿಗೆ ಅವರು ವಿಶ್ವದ ವಿವಿಧ ದೇಶಗಳಲ್ಲಿ ಒಟ್ಟು ಆರನೇ ಬಾರಿ ಐರನ್‌ಮ್ಯಾನ್ ಸ್ಪರ್ಧೆಯನ್ನು ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಗೋವಾ, ಥೈಲ್ಯಾಂಡ್, ಪೋಲೆಂಡ್, ಟರ್ಕಿ ಹಾಗೂ ಕೋಪನ್‌ಹೇಗನ್‌ನಲ್ಲಿ ನಡೆದ ಐರನ್‌ಮ್ಯಾನ್ ಸ್ಪರ್ಧೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಸಂದೀಪ್ ಪಾಟೀಲ್, ಇದೀಗ ಸಿಡ್ನಿಯಲ್ಲೂ ಅದೇ ಸಾಧನೆಯನ್ನು ಮರುಕಳಿಸಿದ್ದಾರೆ.

ಐರನ್‌ಮ್ಯಾನ್ 70.3 ಸ್ಪರ್ಧೆ ವಿಶ್ವದ ಅತ್ಯಂತ ಕಠಿಣ ಸಹಿಷ್ಣುತೆ ಕ್ರೀಡಾ ಸ್ಪರ್ಧೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳು ನಿರಂತರವಾಗಿ 1.9 ಕಿಮೀ ಈಜು, 90 ಕಿಮೀ ಸೈಕ್ಲಿಂಗ್ ಮತ್ತು 21.1 ಕಿಮೀ ಅರ್ಧ ಮ್ಯಾರಥಾನ್ ಓಟವನ್ನು ಪೂರ್ಣಗೊಳಿಸಬೇಕಾಗುತ್ತದೆ.

M45-49 ವಿಭಾಗದಲ್ಲಿ ಸ್ಪರ್ಧಿಸಿದ ಸಂದೀಪ್ ಪಾಟೀಲ್ ಅವರು ಈ ಸಂಪೂರ್ಣ ಸ್ಪರ್ಧೆಯನ್ನು 7 ಗಂಟೆ 16 ನಿಮಿಷ 25 ಸೆಕೆಂಡುಗಳಲ್ಲಿ ಯಶಸ್ವಿಯಾಗಿ ಮುಗಿಸಿ ಗಮನ ಸೆಳೆದಿದ್ದಾರೆ.

Home add -Advt

ಈಜು 49 ನಿಮಿಷ 58 ಸೆಕೆಂಡು,ಸೈಕ್ಲಿಂಗ್: 3 ಗಂಟೆ 38 ನಿಮಿಷ 03 ಸೆಕೆಂಡು, ಓಟ 2 ಗಂಟೆ 35 ನಿಮಿಷ 06 ಸೆಕೆಂಡು. ಈ ಸಾಧನೆಯೊಂದಿಗೆ ಅವರು ತಮ್ಮ ವಿಭಾಗದಲ್ಲಿ 77ನೇ ಸ್ಥಾನ ಪಡೆದುಕೊಂಡಿದ್ದಾರೆ.

ತಮ್ಮ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ಸಂದೀಪ್ ಪಾಟೀಲ್, “ಪ್ರತಿ ಐರನ್‌ಮ್ಯಾನ್ ಸ್ಪರ್ಧೆಯೂ ವಿಭಿನ್ನ ಅನುಭವ ನೀಡುತ್ತದೆ. ಪ್ರತಿಯೊಂದು ಓಟವೂ ದೈಹಿಕ ಮತ್ತು ಮಾನಸಿಕ ಸಹಿಷ್ಣುತೆಯನ್ನು ವಿಭಿನ್ನ ರೀತಿಯಲ್ಲಿ ಪರೀಕ್ಷಿಸುತ್ತದೆ. ಆದರೆ ಎಲ್ಲ ಸ್ಪರ್ಧೆಗಳಿಗೂ ಒಂದೇ ಗುಟ್ಟು — ಸ್ಥಿರತೆ, ಶಿಸ್ತು ಮತ್ತು ಎಂದಿಗೂ ಮುಂದುವರಿಯುವುದನ್ನು ನಿಲ್ಲಿಸದ ಮನೋಭಾವ,” ಎಂದು ಹೇಳಿದರು.

ಪೊಲೀಸ್ ಇಲಾಖೆಯಂತಹ ಒತ್ತಡದ ಕರ್ತವ್ಯಗಳ ನಡುವೆಯೂ ಸಂದೀಪ್ ಪಾಟೀಲ್ ಅವರು ಆರೋಗ್ಯ, ಫಿಟ್ನೆಸ್ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿರುವುದು ಯುವಕರಿಗೆ ಪ್ರೇರಣೆಯಾಗಿದೆ. ಪ್ರತಿದಿನ ನಿಯಮಿತ ತರಬೇತಿ, ಕಟ್ಟುನಿಟ್ಟಿನ ಆಹಾರ ಪದ್ಧತಿ ಹಾಗೂ ಮಾನಸಿಕ ದೃಢತೆ ಮೂಲಕ ಅವರು ಈ ಮಟ್ಟದ ಸಾಧನೆ ಮಾಡುತ್ತಿರುವುದು ವಿಶೇಷ.

ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಅಂತಾರಾಷ್ಟ್ರೀಯ ಮಟ್ಟದ ಸಹಿಷ್ಣುತೆ ಸ್ಪರ್ಧೆಗಳಲ್ಲಿ ನಿರಂತರವಾಗಿ ಭಾಗವಹಿಸಿ ಯಶಸ್ಸು ಸಾಧಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರಂತರ ಅಭ್ಯಾಸದಿಂದ ಯಾವುದೇ ಗುರಿ ಸಾಧಿಸಬಹುದು ಎಂಬುದಕ್ಕೆ ಸಂದೀಪ್ ಪಾಟೀಲ್ ಅವರ ಸಾಧನೆಯೇ ಸಾಕ್ಷಿಯಾಗಿದೆ.

ಸಂದೀಪ್ ಪಾಟೀಲ್ ಅವರ ಸಾಧನೆಗೆ ಪೊಲೀಸ್ ಇಲಾಖೆ, ಕ್ರೀಡಾಭಿಮಾನಿಗಳು, ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ. ಬೆಳಗಾವಿ ಉತ್ತರ ವಲಯಕ್ಕೆ ನೇಮಕಗೊಂಡ ತಕ್ಷಣವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಜಿಲ್ಲೆಯ ಹೆಸರನ್ನು ಮತ್ತೊಮ್ಮೆ ಎತ್ತಿ ಹಿಡಿದಿರುವುದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

Related Articles

Back to top button