Politics

*ಭೂಕುಸಿತ: ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯ ಅಧ್ಯಯನಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ*

ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಕನ್ನಡ, ಕೊಡಗು ಮೊದಲಾದ ಭಾಗದಲ್ಲಿ ಮುಂಗಾರು ಪೂರ್ವ ಮಳೆಗೇ ಭೂಕುಸಿತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ಸೂಚನೆ ನೀಡಿರುವ ಅವರು, ಪಶ್ಚಿಮ ಘಟ್ಟದಲ್ಲಿ ಹಲವು ರಸ್ತೆ, ಮತ್ತಿತರ ಯೋಜನೆಗಳು ಕಾರ್ಯಗತವಾಗುತ್ತಿದ್ದು, ಇದರಿಂದ ಘಟ್ಟ ಅಪಾಯಕ್ಕೆ ಸಿಲುಕಿದೆ, ಆಸ್ತಿಹಾನಿ, ಬೆಳೆ ಹಾನಿ, ಜೀವಿಹಾನಿಯ ಜೊತೆಗೆ ವನ್ಯ ಜೀವಿಗಳೂ ಸಂಕಷ್ಟ ಎದುರಿಸುವಂತಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.

Home add -Advt

ಪಶ್ಚಿಮಘಟ್ಟ ಕ್ಷೀಣಿಸಿದರೆ ಮುಂಬರುವ ದಿನಮಾನಗಳಲ್ಲಿ ತೀವ್ರ ಜಲಕ್ಷಾಮ ಎದುರಾಗುವ ಭೀತಿ ಇದೆ ಎಂಬ ತಜ್ಞರ ಅಭಿಪ್ರಾಯ ಉಲ್ಲೇಖಿಸಿರುವ ಅವರು ಈ ನಿಟ್ಟಿನಲ್ಲಿ ಅಧ್ಯಯನ ಮಾಡಿ 3 ತಿಂಗಳೊಳಗೆ ಪಶ್ಚಿಮಘಟ್ಟದ ತಾಳಿಕೊಳ್ಳುವ ಸಾಮರ್ತ್ಯದ ಬಗ್ಗೆ ವರದಿ ಸಲ್ಲಿಸಲು ಜೀವವೈವಿಧ್ಯಮಂಡಳಿಯ ಸದಸ್ಯ ಕಾರ್ಯದರ್ಶಿ, ಮೌಲ್ಯಮಾಪನ, ಕಾರ್ಯಯೋಜನೆ, ಸಂಶೋಧನೆ ಮತ್ತು ತರಬೇತಿ ಹಾಗೂ ಅರಣ್ಯ ಸಂರಕ್ಷಣೆ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ಸೂಚಿಸಿದ್ದಾರೆ.

ಜೀವವೈವಿಧ್ಯತೆಯ ತಾಣವಾದ ಪಶ್ಚಿಮಘಟ್ಟದಲ್ಲಿ ಕರ್ನಾಟಕದ ಅರಣ್ಯಗಳ ಪೈಕಿ ಶೇ.60ರಷ್ಟು ಅರಣ್ಯ ಪ್ರದೇಶ ಇದ್ದು, ಇದು ಸಸ್ಯಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲಗಳ ನೆಲೆವೀಡಾಗಿದೆ. ಪಶ್ಚಿಮಘಟ್ಟಗಳು ಮಳೆಯ ಮಾರುತ ತಡೆದು ಮಳೆ ಸುರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿರುವ ಈಶ್ವರ ಖಂಡ್ರೆ ಪಶ್ಚಿಮ ಘಟ್ಟದ ಪ್ರಾಮುಖ್ಯತೆ, ಸಂರಕ್ಷಣೆಯ ಮನವರಿಕೆ ಮಾಡಿಸಿದ್ದಾರೆ.


Related Articles

Back to top button