*6 ಮಹಿಳಾ MLAಗಳಿದ್ದರೂ MLCಗೆ ಹೈಕಮಾಂಡ್ ಮಣೆ; ಗಾಯತ್ರಿ ಶಾಂತೇಗೌಡಗೆ ಸಚಿವ ಸ್ಥಾನ ನೀಡಿದ್ದಕ್ಕೆ ಅಸಮಾಧಾನ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ವೇಳೆ ಹಲವು ಸಚಿವಾಕಾಂಕ್ಷಿಗಳಿಗೆ ಮಂತ್ರಿ ಸ್ಥಾನ ಕೈತಪ್ಪಿದೆ. ಮಹತ್ವದ ಬೆಳವಣಿಗೆಯಲ್ಲಿ ಎಂಎಲ್ ಸಿ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ.
ಕಾನೂನು ಹೋರಾಟದ ಬಳಿಕ ಗಾಯತ್ರಿ ಶಾಂತೆಗೌಡ ಅವರಿಗೆ ಮೊನ್ನೆಯಷ್ಟೇ ಹೈಕೋರ್ಟ್ ಪರಿಷತ್ ಸದ್ಯಸ್ಯೆಯಾಗಿ ಜಯ ಎಂದು ಘೋಷಿಸಿತ್ತು. ಎಂ ಎಲ್ ಸಿಯಾಗಿ ಪ್ರಮಾಣವಚನ ಸ್ವೀಕಾರ ಕೂಡ ಇನ್ನೂ ಮಾಡಿಲ್ಲ. ಆಗಲೇ ನೇರವಾಗಿ ಹೈಕಮಾಂಡ್ ನಾಯಕರು ಸಚಿವ ಸ್ಥಾನದ ಪಟ್ಟಿಯಲ್ಲಿ ಹೆಸರು ಪ್ರಕಟಿಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ನಲ್ಲಿ 6 ಮಹಿಳಾ ಶಾಸಕರಿದ್ದರೂ ಎಂಎಲ್ ಸಿ ಗಾಯತ್ರಿ ಶಾಂತೇಗೌಡಗೆ ಮಣೆ ಹಾಕಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್, ನಯನಾ ಮೋಟಮ್ಮ, ಕನಿಜಾ ಫಾತಿಮಾ, ಅನ್ನಪೂರ್ಣ ತುಕಾರಾಂ, ಲತಾ ಮಲ್ಲಿಕಾರ್ಜುನ, ರೂಪಕಲಾ ಇವರೆಲ್ಲರನ್ನು ಬಿಟ್ಟು ಏಕಾಏಕಿ ಪರಿಷತ್ ನೂತನ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರಿಗೆ ಮಂತ್ರಿ ಸ್ಥಾನ ನೀಡಿರುವುದು ಅಚ್ಚರಿ ತಂದಿದೆ.
ಗಾಯತ್ರಿ ಅವರಿಗೆ ಮಂತ್ರಿ ಸ್ಥಾನ ನೀಡಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಅಸಮಾಧಾನಗೊಂಡಿದ್ದು, ಹೈಕಮಾಂಡ್ ನಾಯಕರಿಗೆ ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಚಿವ ಸ್ಥಾನ ನೀಡುವ ನೀಟ್ಟಿನಲ್ಲಿ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆ ನಡುವೆ ಗಾಯತ್ರಿ ಶಾಂತೇಗೌಡಗೆ ಸಚಿವ ಸ್ಥಾನ ಸಿಕ್ಕರೂ ಇಂದು ಸಂಜೆ ಪ್ರಮಾಣವಚನ ಸ್ವೀಕಾರಕ್ಕೆ ಲೋಕಭವನಕ್ಕೆ ಬರುವಂತೆ ಸಿಎಂ ಕಚೇರಿಯಿಂದ ಯಾವುದೇ ಕರೆ ಕೂಡ ಬಂದಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನೂತನ ಸಚಿವರ ಪಟ್ಟಿಯಲ್ಲಿ ಮತ್ತಷ್ಟು ಬದಲಾವಣೆಗಳು ನಡೆದರೂ ಅಚ್ಚರಿ ಇಲ್ಲ.




