LatestUncategorized

*ಪ್ರಧಾನಿ ಮೋದಿ ವಿರುದ್ಧ ಖರ್ಗೆ ಹೇಳಿಕೆಗೆ ಸಿಎಂ ತಿರುಗೇಟು*

ಪ್ರಗತಿವಾಹಿನಿ ಸುದ್ದಿ; ಹಾವೇರಿ: ದ್ರೋಹಿಗಳಿಗೆ ಮೋದಿ ಸಿಂಹ ಸ್ವಪ್ನ ಆಗಿದ್ದಾರೆ. ಹೀಗೆ ಮಾತಾಡಿಯೇ ಕಾಂಗ್ರೆಸ್ ಈ ಮಟ್ಟಕ್ಕೆ ಬಂದಿದೆ. ಪ್ರಧಾನಿ ಬಗ್ಗೆ ಅವರ ಮಾತುಗಳು ಕಾಂಗ್ರೆಸ್‌ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇಂದು ಅವರು ಶಿಗ್ಗಾವಿಯ ಕೋಣನಕೇರಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮಲ್ಲಿಕಾರ್ಜುನ ಖರ್ಗೆ ಅವರ “ಮೋದಿ ಅಂದರೆ ವಿಷ ಸರ್ಪ” ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದರು.

ಕ್ಷೇತ್ರದ ಎಲ್ಲಾ ಹಳ್ಳಿಹಳ್ಳಿಗಳಿಗೆ ನಾನು ಭೇಟಿ ಕೊಡುತ್ತಿದ್ದೇನೆ. ನಿರೀಕ್ಷೆ ಮೀರಿ ಅಭೂತಪೂರ್ವ ಬೆಂಬಲ ನನಗೆ ಸಿಗುತ್ತಿದೆ. ಇದು ಮುಖ್ಯಮಂತ್ರಿ ಕ್ಷೇತ್ರವಾಗಿದೆ. ಜತೆಗೆ ನಾನು ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಅತಿ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಬೇಕೆಂದು ಜನ ಭಾವನೆ ಹೊಂದಿದ್ದಾರೆ. ಆದ್ದರಿಂದ ದಾಖಲೆ ಮತಗಳಿಂದ ಜನ ನನ್ನನ್ನು ಆಯ್ಕೆ ಮಾಡುತ್ತಾರೆ ಅನ್ನೋ ವಿಶ್ವಾಸ ನನ್ನಲ್ಲಿದೆ. ಅವರಿಗೆ ನಾನು ಸದಾ ಚಿರಋಣಿ ಆಗಿದ್ದೀನಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಎಲ್ಲರಿಗೂ ನಾವು ಗೌರವವನ್ನು ಕೊಡುತ್ತೀವಿ:
ರಾಷ್ಟ ದ್ರೋಹಿಗಳಿಗೆ, ಭಯೋತ್ಪಾದಕರಿಗೆ, ರಾಷ್ಟ್ರ ವಿರೋಧಿಗಳಿಗೆ, ಶಾಂತಿ ಕದಡುವವರಿಗೆ ಮೋದಿ ಸಿಂಹ ಸ್ವಪ್ನ ಆಗಿದ್ದಾರೆ. ಖರ್ಗೆ ಅವರಿಗೆ ಯಾಕೆ ಹಾಗೆ ಅನ್ನಿಸಿತೋ ಗೊತ್ತಿಲ್ಲ. ದೇಶದ ಪ್ರಧಾನಿಗಳಿಗೆ ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಹಿಂದೆ ಹೀಗೆಲ್ಲಾ ಮಾತನಾಡಿಯೇ ಕಾಂಗ್ರೆಸ್ ಈ ಮಟ್ಟಕ್ಕೆ ಬಂದಿದೆ. ಕಾಂಗ್ರೆಸ್ ನವರಿಗೆ ಅಧಿಕಾರದ ಅಮಲು ಇನ್ನೂ ಇಳಿದಿಲ್ಲ. ಹಿಂದಿನ ಅಮಲಿನಲ್ಲಿಯೇ ಇನ್ನೂ ಮಾತನಾಡುತ್ತಿದ್ದಾರೆ. ಕರ್ನಾಟಕ ಸುಸಂಸ್ಕೃತ ನಾಡು. ಎಲ್ಲರಿಗೂ ನಾವು ಗೌರವವನ್ನು ಕೊಡುತ್ತೀವಿ. ಖರ್ಗೆ ಅವರ ವಿಚಾರಗಳ ಬಗ್ಗೆ ವಿರೋಧ ಇದ್ದರೂ ಅವರ ಹಿರಿತನಕ್ಕೆ ನಾವು ಗೌರವ ಕೊಡುತ್ತೀವಿ. ಹಿರಿಯರಾಗಿ ಅವರು ಈ ರೀತಿ ಮಾತನಾಡಿದ್ದು ಖೇದಕರ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್ ಗೆ ಸೋಲಿನ ಭೀತಿ ಎದುರಾಗಿದೆ
ಅಮಿತ್ ಶಾ ಬ್ಯಾನ್ ಮಾಡಬೇಕು ಎಂದು ಡಿಕೆಶಿ ಚುನಾವಣಾ ಆಯೋಗಕ್ಕೆ ಪಿಟಿಷನ್ ಕೊಟ್ಟಿದ್ದಾರೆ. ಕಾಂಗ್ರೆಸ್ ಅವರಿಗೆ ಸೋಲಿನ ಭೀತಿ ಎದುರಾಗಿದೆ. ತಾವು ಸೋಲುತ್ತೀವಿ ಎಂದು ಗೊತ್ತಾದಾಗ ಹೀಗಾಗಿ ಪಿಟಿಷನ್ ಕೊಡೋದು, ಚುನಾವಣಾ ಆಯೋಗಕ್ಕೆ ಹೋಗೋ ಕೆಲಸ ಮಾಡುತ್ತಿದ್ದಾರೆ. ಅದಕ್ಕೆಲ್ಲಾ ಕಾನೂನು ಪ್ರಕಾರ ಏನು ಆಗಬೇಕೋ ಆಗುತ್ತೆ. ಅದರಲ್ಲಿ ಯಾವುದೇ ಸತ್ಯ ಇಲ್ಲ, ಯಾವುದೇ ಹುರುಳಿಲ್ಲ. ಅದು ತಿರಸ್ಕಾರವಾಗುತ್ತೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ನಮ್ಮ ಕರ್ತವ್ಯ ಮಾಡುತ್ತೇವೆ:
ಜಿಲ್ಲಾದ್ಯಕ್ಷರಿಗೆ ಸೂಕ್ಷ್ಮ ಅತಿಸೂಕ್ಷ್ಮ ಮತಗಟ್ಟೆಗಳ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದ ಸಂಬಂಧ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಕಾಂಗ್ರೆಸ್ ಪಕ್ಷ ತೋಳ್ಬಲ, ಹಣಬಲದಿಂದ ಚುನಾವಣೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ಹಿಂದೆ ಹಲವಾರು ಸಂದರ್ಭಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಪೆಟ್ಟು ನೋವು ಸಹ ಆಗಿದೆ. ಅದು ಆಗಬಾರದು ಎಂದು ನಮ್ಮ ರಕ್ಷಣೆಗೆ, ನಮ್ಮ ಮತದಾರರ ಸುರಕ್ಷತೆಗೆ ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಕಾಂಗ್ರೆಸ್ ಪುಂಡಾಟಿಕೆ ಮಾಡ್ತಾ ನಮ್ಮ ಜನರಿಗೆ ಹಿಂಸೆ ಆಗಬಾರದು ಎಂದು ನಮ್ಮ ರಕ್ಷಣೆಗೆ ಏನು ಮಾಡಬೇಕೋ ಅದನ್ನು ಮಾಡುತ್ತೀವಿ. ರಾಜಕೀಯ ಪಕ್ಷವಾಗಿ ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೀವಿ. ಇದರಲ್ಲಿ ಏನು ಬಹಳ ದೊಡ್ಡ ಅಪರಾಧ ಆಗಿದೆ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರೋ ಗೊತ್ತಿಲ್ಲ. ಚುನಾವಣಾ ಆಯೋಗ ತನ್ನ ಕೆಲಸ ಮಾಡುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.


https://pragati.taskdun.com/mallikarjuna-khargeclarificationpm-modisnake-statement/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button