*ಪಿಎಸ್ಐ ಮತ್ತು ಪಿಸಿ ಮೇಲೆ ಲೋಕಾಯುಕ್ತ ದಾಳಿ: ಠಾಣೆ ಮುಂದೆ ಪಾಟಾಕಿ ಸಿಡಿಸಿದ ಜನ*

ಪ್ರಗತಿವಾಹಿನಿ ಸುದ್ದಿ: ಪಿಎಸ್ಐ ಮತ್ತು ಪಿಸಿ ಮೇಲೆ ಲೋಕಾಯುಕ್ತ ದಾಳಿ ನಡೆದ ಬೆನ್ನಲ್ಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಠಾಣೆ ಮುಂದೆ ಪಾಟಾಕಿ ಸಿಡಿಸಿ ಜನ ಸಂಭ್ರಮಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರು ಪೊಲೀಸ್ ಠಾಣೆಯ
ಪಿಎಸ್ಐ ಭೀಮಪ್ಪ ರಬಕವಿ ಹಾಗೂ ಪಿಸಿ ಸಂತೋಷ್ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ಜನತೆ ಠಾಣೆಯ ಮುಂದೆಯೇ ಪಟಾಕಿ ಸಿಡಿಸಿ ತಮ್ಮ ಸಂತೋಷವನ್ನು ಹೊರಹಾಕಿದ್ದಾರೆ.
ಕಳೆದ ಕೆಲವು ಸಮಯದಿಂದ ಪಿಎಸ್ಐ ಅವರ ಲಂಚಾವತಾರ ಮತ್ತು ಕಿರುಕುಳದಿಂದ ಕೆರೂರು ಪಟ್ಟಣದ ಜನತೆ ತೀವ್ರವಾಗಿ ಬೇಸತ್ತಿದ್ದರು. ಇಂದು ಲೋಕಾಯುಕ್ತ ಅಧಿಕಾರಿಗಳು ಠಾಣೆಗೆ ಭೇಟಿ ನೀಡಿ ವಿಚಾರಣೆ ಆರಂಭಿಸುತ್ತಿದ್ದಂತೆಯೇ, ಈ ವಿಷಯ ಇಡೀ ಪಟ್ಟಣದಲ್ಲಿ ಕಾಡಿಚ್ಚಿನಂತೆ ಹಬ್ಬಿದೆ.
ವಿಚಾರಣೆ ಮುಗಿಸಿ ಪಿಎಸ್ಐ ಭೀಮಪ್ಪ ರಬಕವಿ ಅವರು ಠಾಣೆಯಿಂದ ಹೊರಬರುತ್ತಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ, ಠಾಣೆಯ ಎದುರು ಜಮಾಯಿಸಿದ ಯುವಕರ ಗುಂಪೊಂದು ಪಟಾಕಿ ಸಿಡಿಸಿ ಜಯಘೋಷ ಹಾಕಿದೆ.

