*ಆಹಾರ ಅರಸಿ ಬಂದ ಜಿಂಕೆ ನಾಯಿ ದಾಳಿಗೆ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಆಹಾರ ಅರಸಿ ನಾಡಿಗೆ ಬಂದ ಜಿಂಕೆಯೊಂದು ಬೀದಿ ನಾಯಿಗಳ ದಾಳಿಗೆ ಸಿಲುಕಿ ಸಾವನ್ನಪ್ಪಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಅನಿರೀಕ್ಷಿತವಾಗಿ ಜಿಂಕೆಯೊಂದು ಕಾಣಿಸಿಕೊಂಡಿತ್ತು. ಕಾಡು ಬಿಟ್ಟು ಜನವಸತಿ ಪ್ರದೇಶಕ್ಕೆ ಬಂದಿದ್ದ ಈ ಅಪರೂಪದ ಅತಿಥಿಯನ್ನು ಕಂಡ ಬೀದಿ ನಾಯಿಗಳ ಹಿಂಡು ಅದರ ಬೆನ್ನಟ್ಟಿವೆ. ಬೀದಿ ನಾಯಿಗಳ ಅಟ್ಟಹಾಸಕ್ಕೆ ಬೆದರಿದ ಜಿಂಕೆಯು, ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದೆ. ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಓಡುವಾಗ ಜಿಂಕೆಯು ತೀವ್ರವಾಗಿ ಗಾಯಗೊಂಡಿದೆ. ಗಾಬರಿಯಿಂದಲೇ ಓಡಿದ ಜಿಂಕೆಯು ಸಮೀಪದ ಅರಣ್ಯ ಇಲಾಖೆಯ ಕಚೇರಿ ಆವರಣಕ್ಕೆ ನುಗ್ಗಿದೆ. ಈ ಬಗ್ಗೆ ಸ್ಥಳೀಯರು ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಸಿಬ್ಬಂದಿ ಕೂಡಲೇ ಜಿಂಕೆಯನ್ನು ರಕ್ಷಣೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಲು ಮುಂದಾದರು. ಚಿಕಿತ್ಸೆ ಬಳಿಕ ಮರಳಿ ಕಾಡಿಗೆ ಬಿಡುವಷ್ಟರಲ್ಲೇ ತೀವ್ರ ಆಘಾತ ಮತ್ತು ಗಾಯದ ನೋವಿನಿಂದಾಗಿ ಜಿಂಕೆ ಸಾವನ್ನಪ್ಪಿತು.



