*ಉಡುಪಿ ಮೂಲದ ನವವಿವಾಹಿತೆ ಬೆಳಗಾವಿಯಲ್ಲಿ ಆತ್ಮಹತ್ಯೆಗೆ ಶರಣು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಮುನಿಯಾಲು ಮೂಲದ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.
ಬೆಳಗಾವಿ ನಗರದ ಮಹಾದ್ವಾರ ರಸ್ತೆಗೆ ಹೊಂದಿಕೊಂಡ ಅಷ್ಟೇಕರ್ ಗಲ್ಲಿಯಲ್ಲಿ ರಕ್ಷಿತಾ ಪೂಜಾರಿ (29) ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ.
ಒಂದು ತಿಂಗಳ ಹಿಂದಷ್ಟೇ ಮಂಜುನಾಥ ಪೂಜಾರಿ ಎಂಬವರೊಂದಿಗೆ ಅವರ ವಿವಾಹ ನೆರವೇರಿತ್ತು. ರಕ್ಷಿತಾ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸದ್ಯ ವರ್ಕ್ ಪ್ರಮ್ ಹೋಂ ಮೂಲಕ ಕೆಲಸ ಮಾಡುತ್ತಿದ್ದರು. ರವಿವಾರ ಬೆಳಗ್ಗೆ ತನ್ನ ತಾಯಿಗೆ ಕರೆ ಮಾಡಿದ್ದ ಅವರು ಗಂಡನ ಮನೆಯಲ್ಲಿ ಇರುವುದಾಗಿ ತಿಳಿಸಿದ್ದಾರೆ.
ಸಂಜೆವರೆಗೆ ಫೋನ್ ಸಂಪರ್ಕ ಮಾಡಿದ್ದರೂ ರಕ್ಷಿತಾ ಫೋನ್ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಕುಟುಂಬಸ್ಥರು ಅನುಮಾನ ಗೊಂಡಿದ್ದಾರೆ. ಕೊನೆಗೆ ಮನೆಯ ಕಿಟಕಿಯಿಂದ ಗಮನಿಸಿದಾಗ ರಕ್ಷಿತಾ ತನ್ನ ಚೂಡಿದಾರ ಶಾಲನ್ನು ಕುತ್ತಿಗೆಗೆ ಬಿಗಿದು ಫ್ಯಾನ್ ಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ರಕ್ಷಿತಾ ಅವರ ಕುಟುಂಬ ಸದ್ಯ ಬೆಳಗಾವಿ ಶಿವಾಜಿನಗರದಲ್ಲಿ ವಾಸವಾಗಿದ್ದು ಪತಿ ಉದ್ಯಮ ಬಾಗನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ಪತಿ ಕೆಲಸಕ್ಕೆ ಹೋದ ನಂತರ ರಕ್ಷಿತಾ ಈ ಕೃತ್ಯ ಎಸಗಿದ್ದಾರೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


