*ಆರೋಗ್ಯ ಸಂಜೀವಿನಿ ಹಾಗೂ PM-RAHAT ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಯಶಸ್ವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಬಲಿಷ್ಠ ಜಾಲದಿಂದ (ನೆಟ್ವರ್ಕ್) ತುರ್ತು ಪರಿಸ್ಥಿತಿಯಲ್ಲಿ ‘ಗೋಲ್ಡನ್ ಅವರ್ಸ್’ ಅವಧಿಯಲ್ಲಿಯೇ ತ್ವರಿತ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತದೆ. ಇದರಿಂದ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ನಗರದಲ್ಲಿ ಬುಧವಾರ(ಸೆ.02) ಜರುಗಿದ ಕರ್ನಾಟಕ ಆರೋಗ್ಯ ಸಂಜೀವಿನಿ (KASS) ಹಾಗೂ PM-RAHAT ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಖಾಸಗಿ ಆಸ್ಪತ್ರೆಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಗಳಡಿ ಎಂಪ್ಯಾನೆಲ್ (Empanel) ಆಗಿ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಕರ್ನಾಟಕ ಆರೋಗ್ಯ ಸಂಜೀವಿನಿ ಹಾಗೂ PM-RAHAT ಯೋಜನೆಗಳ ಸೌಲಭ್ಯಗಳನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳು ಹಾಗೂ ಜಿಲ್ಲಾ AB-ArK ನೋಡಲ್ ಅಧಿಕಾರಿಗಳಾದ ಡಾ. ಗೀತಾ ಕಾಂಬಳೆ ಅವರು ಕರ್ನಾಟಕ ಆರೋಗ್ಯ ಸಂಜೀವಿನಿ (KASS) ಹಾಗೂ PM-RAHAT ಯೋಜನೆಗಳ ಉದ್ದೇಶ, ಗುರಿಗಳು, ಪ್ರಮುಖ ಅಂಶಗಳು ಮತ್ತು ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ತಿಳಿಸಿದರು.
ಕಾರ್ಯಾಗಾರದಲ್ಲಿ ವೈದ್ಯಕೀಯ ಸಲಹೆಗಾರರು ಹಾಗೂ SAST ಮತ್ತು KASS ನೋಡಲ್ ಅಧಿಕಾರಿಗಳಾದ ಡಾ. ಪರಿಮಳಾ ಮರೂರ್, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ ಚಿಕ್ಕೋಡಿ ಹಾಗೂ ಮೀರಜ ವಿಭಾಗದ ಜಿಲ್ಲಾ ಸಂಯೋಜಕರಾದ ಡಾ. ಪ್ರಶಾಂತ್ ಹೊತ್ತಿಗಿಮಠ ಹಾಗೂ eDAR NIC ಜಿಲ್ಲಾ ಅನುಷ್ಠಾನ ವ್ಯವಸ್ಥಾಪಕರಾದ
ಶಬ್ಬಮ ಹವಾಲ್ದಾರ್ ಅವರು ತಾಂತ್ರಿಕ ಉಪನ್ಯಾಸಗಳನ್ನು ನೀಡಿದರು. ಉಪನ್ಯಾಸಗಳಲ್ಲಿ ಯೋಜನೆಗಳ ಅನುಷ್ಠಾನ, ಖಾಸಗಿ ಆಸ್ಪತ್ರೆಗಳ ಎಂಪ್ಯಾನೆಲ್ ಪ್ರಕ್ರಿಯೆ, ಫಲಾನುಭವಿಗಳಿಗೆ ದೊರೆಯುವ ಸೌಲಭ್ಯಗಳು ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ಸವಿಸ್ತಾರ ಮಾಹಿತಿ ನೀಡಿದರು. ಬಳಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಕೇಳಿದ ವಿವಿಧ ಪ್ರಶ್ನೆಗಳಿಗೆ ತಾಂತ್ರಿಕ ತಜ್ಞರು ಸಮರ್ಪಕ ಉತ್ತರಗಳನ್ನು ನೀಡಿ ಅವರ ಸಂದೇಹಗಳನ್ನು ನಿವಾರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ (ಬಿಮ್ಸ್) ನಿರ್ದೇಶಕರಾದ ಡಾ. ವಿನಯ್ ದಾಸ್ತಿಕೊಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಜಗದೀಶ ಗಾಣಗಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪ್ರಾದೇಶಿಕ ಸಮಾಲೋಚಕರಾದ ಡಾ. ನವೀದ್ ಅಹ್ಮದ್ ಶೇಖ್, ಭಾರತೀಯ ವೈದ್ಯಕೀಯ ಸಂಘ (IMA) ಬೆಳಗಾವಿ ಘಟಕದ ಅಧ್ಯಕ್ಷರಾದ ಡಾ. ಹೇಮಂತ್ ಕೌಜಲಗಿ, IMA ಬೆಳಗಾವಿ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಡಾ. ರಾಘವೇಂದ್ರ ಸಾಗರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ಬಸವರಾಜ ರಾಯಗೋಳ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಎ. ಕುಂಬಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಖಾಸಗಿ ಆಸ್ಪತ್ರೆಗಳ ವೈದ್ಯರು, ಆರೋಗ್ಯ ಮಿತ್ರರು ಉಪಸ್ಥಿತರಿದ್ದರು.


