
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೋವಿಡ್ ಲಸಿಕೆ ಯಾವಾಗಬೇಕಾದರೂ ಬರಬಹುದು, ಆದರೆ ಲಸಿಕೆ ಬರುವವರೆಗೂ ನಿರ್ಲಕ್ಷ್ಯ ಬೇಡ. ಲಸಿಕೆ ವಿತರಣೆಗೆ ಎಲ್ಲಾ ರಾಜ್ಯಗಳು ಸಿದ್ಧತೆ ನಡೆಸಿ ಎಂದು ಪ್ರಧಾನಿ ಮೋದಿ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.
ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ಲಸಿಕೆ ಯಾವಾಗ ಬರುತ್ತೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೂ ಸ್ಪಷ್ಟವಾಗಿ ಮಾಹಿತಿ ನೀಡಿಲ್ಲ. ಆದರೆ ಎಲ್ಲಾ ರಾಷ್ಟ್ರಗಳಲ್ಲೂ ಲಸಿಕೆ ಕುರಿತು ಕೆಲಸ ಮಾಡುತ್ತಿದ್ದಾರೆ. ಲಸಿಕೆ ದರದ ಬಗ್ಗೆ, ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದರ ಬಗ್ಗೆ ನಿರ್ಧಾರವಾಗಿಲ್ಲ. ಕೋವಿಡ್ ವ್ಯಾಕ್ಸಿನ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದರು.
ಕೊರೊನಾ ಲಸಿಕೆ ವಿಚಾರದಲ್ಲಿ ಕೆಲವರಿಂದ ರಾಜಕಾರಣ ಮಾಡಲಾಗುತ್ತಿದೆ. ಆದರೆ ಇದನ್ನು ನಾವು ನಿಲ್ಲಿಸಲಾಗದು. ಲಸಿಕೆ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಆದರೆ ಶೀಘ್ರದಲ್ಲಿ ಲಸಿಕೆ ಲಭ್ಯವಾಗುವ ಭರವಸೆಯಿದೆ. ಲಸಿಕೆ ಬಂದ ಬಳಿಕ ಎಲ್ಲರಿಗೂ ಲಭ್ಯವಾಗುವ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಅಲ್ಲಿಯವರೆಗೂ ಯಾವುದೇ ನಿರ್ಲಕ್ಷ್ಯ ಬೇಡ. ಎಲ್ಲಾ ರಾಜ್ಯಗಳು ಲಸಿಕೆ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್ ಗಳ ವ್ಯವಸ್ಥೆ ಮಾಡಿಕೊಳ್ಳಿ. ರಾಜ್ಯಗಳು ನಡೆಸಿರುವ ಸಿದ್ಧತೆ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಿ ಎಂದರು.
ಇನ್ನು ಭಾರತದಲ್ಲಿ ಮತೆ ಕೊರೊನಾ ಸೋಂಕು ಹೆಚ್ಚಳವಾಗುವ ಸಾಧ್ಯತೆಯಿದೆ. ಹಾಗಾಗಿ ಸಾಮಾಜಿಕ ಅಂತರ, ಮಾಸ್ಕ್ ವಿಚಾರದಲ್ಲಿ ಉದಾಸೀನ ಬೇಡ. ಸೋಂಕು ತಗುಲಿದವರು ಮುಚ್ಚಿಡುವ ಯತ್ನ ಮಾಡಬೇಡಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು. ಲಸಿಕೆ ಬರಲಿದೆ ಎಂದು ಉದಾಸೀನ ಮಾಡುವುದು ಸರಿಲ್ಲ ಎಂದು ಎಚ್ಚರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ