*ಪತಿಬಿಟ್ಟು ಬರಲು ಒಪ್ಪದ ಪ್ರಿಯತಮೆ: ಕಾರಿನಲ್ಲಿಯೇ ಕೊಲೆಗೈದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ತಾನೂ ಆತ್ಮಹತ್ಯೆಗೆ ಶರಣಾದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ವಿವಾಹಿತ ಮಹಿಳೆಯೊಂದಿಗೆ ವಿವಾಹಿತ ವ್ಯಕ್ತಿಯ ಅಕ್ರಮ ಸಂಬಂಧ ಘೋರ ಅಂತ್ಯ ಕಂಡಿದೆ. ಪತಿಯನ್ನು ಬಿಟ್ಟು ಬರಲು ಒಪ್ಪದ ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ದು ಹತ್ಯೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಲ್ಲದೇ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರಾಮಾಂಜಿನಪ್ಪ ಎಂಬಾತ ತನ್ನ ಪ್ರಿಯತಮೆ ಸುಜಾತ (35)ಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೇವನಹಳ್ಳಿ ಮೂಲದ ಸುಜಾತಾಳಿಗೆ ಅದಾಗಲೇ ಮದುವೆಯಾಗಿದ್ದರೂ ರಾಮಾಅಂಜಿನಪ್ಪನ ಜೊತೆ ಅಕ್ರಮ ಸಂಬಂಧವಿತ್ತು. ಆತನಿಗೂ ವಿವಾಹವಾಗಿತ್ತು. ಸುಜಾತಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ ರಾಮಾಂಜಿನಪ್ಪ, 4 ತಿಂಗಳ ಹಿಂದೆ ತನ್ನ ಹೆಂಡತಿಯಿಂದ ಡಿವೋರ್ಸ್ ಪಡೆದುಕೊಂಡಿದ್ದ. ಬಳಿಕ ಸುಜಾತಳಿಗೆ ಪತಿಯನ್ನು ಬಿಟ್ಟು ತನ್ನಜೊತೆ ಬರುವಂತೆ ಒತ್ತಾಯಿಸಿದ್ದ. ಇದಕ್ಕೆ ಸುಜಾತ ಒಪ್ಪದಿದ್ದಾಗ ಕಾಟ ಕೊಡಲು ಶುರುಮಾಡಿದ್ದ. ಆದರೂ ಯಾವ ಕಾರಣಕ್ಕೂ ಗಂಡನನ್ನು ಬಿಟ್ಟು ಬರುವುದಿಲ್ಲ ಎಂದು ಸುಜಾತಾ ಹೇಳಿದ್ದಳಂತೆ.
ಇದೇ ಕೋಪಕ್ಕೆ ರಾಮಾಂಜಿನಪ್ಪ ಸುಜಾತಾಳನ್ನು ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆ ಬಚ್ಚಹಳ್ಳಿ ಬಳಿ ಕಾರಿನಲ್ಲಿ ಕರೆದೊಯ್ದು ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಪೊಲೀಸರು ಕಾರು ಪರಿಶೀಲನೆ ಮಾಡಿದಾಗ ಮಾರಸಂದ್ರದ ಸುರೇಶ್ ಅವರದ್ದು ಎಂದು ಗೊತ್ತಾಗಿತ್ತು. ಬಳಿಕ ಸುರೇಶ್ ಅವರ ಕಾರನ್ನು ರಾಮಾಂಜಿನಪ್ಪ ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿತ್ತು. ರಾಮಾಂಜಿನಪ್ಪನಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾಗ ಬೆಂಗಳೂರಿನ ಬಿಡದಿ ಬಳಿ ರೈಲ್ವೇ ನಿಲ್ದಾಣ ಬಳಿ ಶವವಾಅಗಿ ಪತ್ತೆಯಾಗಿದ್ದಾನೆ.
ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲಿಸರು ತನಿಖೆ ನಡೆಸಿದ್ದಾರೆ.



