ಶೆಟ್ಟರ್ ನಿವಾಸಕ್ಕೂ ಭೇಟಿ ನೀಡಿದ ಡಿಸಿಎಂ ಡಿಕೆಶಿ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಜಗದೀಶ ಶೆಟ್ಟರ್ ಅವರ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬುಧವಾರ ಭೇಟಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತ್ತಿತರ ಗಣ್ಯರೊಂದಿಗೆ ಜಗದೀಶ ಶೆಟ್ಟರ್ ಅವರೊಂದಿಗೆ ರಾಜಕೀಯ ಬೆಳವಣಿಗೆಗಳ ಕುರಿತು ಸುಧೀರ್ಘವಾಗಿ ಚರ್ಚಿಸಿ, ಉಪಾಹಾರ ಕೂಟದಲ್ಲಿ ಭಾಗಿಯಾದರು.

ಭೇಟಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಚುನಾವಣೆ ಸಮಯದಲ್ಲಿ ಹಾಗೂ ಚುನಾವಣೆ ನಡೆದ ನಂತರ ನಾನು ಸಾಕಷ್ಟು ಬ್ಯುಸಿಯಾಗಿದ್ದೆ. ಹೀಗಾಗಿ ನಮಗೆ ಶಕ್ತಿ ತುಂಬಿದ ನಾಯಕರನ್ನು ಭೇಟಿ ಮಾಡಲು ಈ ಪ್ರವಾಸ ಕೈಗೊಂಡಿದ್ದೇನೆ. ಸರ್ಕಾರ ರಚನೆ, ಸಚಿವ ಸಂಪುಟ, ಖಾತೆ ಹಂಚಿಕೆ, ಇಲಾಖಾವರು ಸಭೆಗಳು, ಗ್ಯಾರಂಟಿ ಯೋಜನೆಗಳ ಜಾರಿ ಕುರಿತಂತೆ ಸಾಕಷ್ಟು ಕೆಲಸಗಳಲ್ಲಿ ನಿರತನಾಗಿದ್ದೆ. ಈಗ ಸಮಯ ಮಾಡಿಕೊಂಡು ನಮ್ಮ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ, ಗುಬ್ಬಿ ವಾಸು, ಶಿವಲಿಂಗೇಗೌಡರು, ಪುಟ್ಟಣ್ಣ, ಬಾಬುರಾವ್ ಚಿಂಚನಸೂರು ಅವರನ್ನು ಭೇಟಿ ಮಾಡಲು ಬಂದಿದ್ದೇನೆ” ಎಂದರು.

“ಲಕ್ಷ್ಮಣ ಸವದಿಯವರು ನಮ್ಮ ನಾಯಕರು. ಕಷ್ಟ ಕಾಲದಲ್ಲಿ ಅವರು ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ನಮ್ಮ ಪಕ್ಷದಲ್ಲಿ ಯಾರಿಗೂ ಬೇಸರವಾಗಿಲ್ಲ. ಪಕ್ಷದ ಅಧ್ಯಕ್ಷನಾಗಿ ಹಿರಿಯ ನಾಯಕರಾದ ಸವದಿ ಹಾಗೂ ಶೆಟ್ಟರ್ ಅವರನ್ನು ಸಹ ಭೇಟಿ ಮಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಯಾವುದೇ ನಾಯಕರನ್ನು ಕೈ ಬಿಡುವುದಿಲ್ಲ ಎಂದಷ್ಟೇ ಹೇಳುತ್ತೇನೆ. ನಮಗೆ ಕಷ್ಟಕಾಲದಲ್ಲಿ ಕೈ ಹಿಡಿದವರನ್ನು ಕಾಂಗ್ರೆಸ್ ಪಕ್ಷವು ಕೂಡ ಕೈ ಹಿಡಿಯಲಿದೆ” ಎಂದರು.
https://pragati.taskdun.com/do-you-know-how-many-cases-were-registered-for-breaking-the-rules-on-world-tobacco-day/
https://pragati.taskdun.com/lets-wait-for-the-conclusion-of-the-volume-basavaraja-bommai/
https://pragati.taskdun.com/two-ias-officers-retire-new-regional-commissioner-for-belgaum/




