ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ವಾಮಾಚಾರ
ಪ್ರಗತಿವಾಹಿನಿ ಸುದ್ದಿ, ಗೋಕಾಕ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಅಭ್ಯರ್ಥಿಗಳು ಮಾಟ -ಮಂತ್ರಕ್ಕೆ ಮೊರೆ ಹೊಗುತ್ತಿದ್ದಾರೆ.
ಗೋಕಾಕ ತಾಲೂಕಿನ ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಮ್ಮನಕೋಲ ಗ್ರಾಮದಲ್ಲಿ ವಾಮಾಚಾರ ನಡೆಸಿದ್ದಾರೆ. ವಿರೋಧಿ ಬಣದ ಅಭ್ಯರ್ಥಿಗಳ ಮನೆ ಎದುರು ಲಿಂಬೆ ಹಣ್ಣು, ತೆಂಗಿನಕಾಯಿ, ಗುಲಾಲು, ದಾರ ಹೀಗೆ ಅನೇಕ ವಸ್ತುಗಳನ್ನು ಇಟ್ಟು ವಾಮಾಚಾರ ನಡೆಸಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದು, ಜನರು ವಾಮಾಚಾರ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸುಮಾರು ೧೦-೧೫ ವರ್ಷಗಳಿಂದ ರಾಜಕಾರಣ ನಡೆಸಿರುವವರು ಇಂಥ ವಾಮಾಚಾರ ಮಾಡಿಸಿದ್ದು, ಇಂಥ ರಾಜಕಾರಣದಿಂದ ಗ್ರಾಮದ ಬೆಳವಣಿಗೆ ಆಗುವುದಿಲ್ಲ. ದ್ವೇಷದ ರಾಜಕಾರಣ ಮಾಡಿ ಇವರು ಸಾಧಿಸುವುದಾದರೂ ಏನು. ಗ್ರಾಮದ ಉದ್ಧಾರ ಇವರಂಥ ಕುತಂತ್ರಿಗಳಿಂದ ಆಗಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಮಾಚರದ ಬಗ್ಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ವಾಮಾಚಾರ ಮಾಡಿದವರ ವಿರುದ್ಧ ಗ್ರಾಮದ ಹನುಮಂತ ದೇವಸ್ಥಾನದ ಎದುರು ನೂರಾರು ಜನ ಸೇರಿ ಧಿಕ್ಕಾರ ಕೂಗಿದರು. ಹನುಮಂತ ದೇವರು ಅವರಿಗೆ ಪಾಠ ಕಲಿಸಲಿ ಎಂದು ಪ್ರಾರ್ಥಿಸಿದರು.
ಮಾಟ -ಮಂತ್ರ ಮಾಡಿದ್ದನ್ನು ಗ್ರಾಮಸ್ಥರು ಸೇರಿ ಈ ಎಲ್ಲ ವಸ್ತುಗಳ ಚೀಲಗಳನ್ನು ಗ್ರಾಮದ ಶ್ರೀ ಹನುಮಂತ ದೇವರ ಗುಡಿಗೆ ಹೋಗಿ ಕಟ್ಟಿದ್ದಾರೆ.



