
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನ ಪರಿಷತ್ ಮಾಜಿ ಸಭಾಪತಿ ಮತ್ತು ಸತತ ೪೦ ವರ್ಷಕ್ಕೂ ಹೆಚ್ಚಿನ ಅವಧಿಗೆ ವಿಧಾನ ಪರಿಷತ್ನ ಸದಸ್ಯರಾದ ಬಸವರಾಜ ಹೊರಟ್ಟಿ ಅವರು ಹುಬ್ಬಳ್ಳಿಯಲ್ಲಿ
ಸ್ಥಾಪಿಸಿದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘವು ವಾಯವ್ಯ ಶಿಕ್ಷಕರ
ಮತಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅರುಣ ಶಹಾಪೂರ ಅವರಿಗೆ ಶುಕ್ರವಾರ ಬೆಂಬಲ
ಘೋಷಿಸಿದೆ.
ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಪಿ. ಲಮಾಣಿ ಮತ್ತು ಬೆಳಗಾವಿ ನಗರ ಘಟಕದ
ಅಧ್ಯಕ್ಷ ಎಂ.ಎಸ್. ದೊಡಮನಿ ಅವರು ಸಂಘದ ಪದಾಧಿಕಾರಿಗಳೊಂದಿಗೆ ಅರುಣ
ಶಹಾಪೂರ ಅವರನ್ನು ಭೇಟಿ ಮಾಡಿ ತಮ್ಮ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಪಿ. ಲಮಾಣಿ ಅವರು ಸಂಘದ
ಸಂಸ್ಥಾಪಕರಾದ ಬಸವರಾಜ ಹೊರಟ್ಟಿ ಅವರು ಬಿಜೆಪಿಗೆ ಸೇರ್ಪಡೆಗೊಂಡು ಪಶ್ಚಿಮ
ಶಿಕ್ಷಕರ ಮತಕ್ಷೇತ್ರದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಹೊರಟ್ಟಿ ಅವರ
ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಹಗಲಿರುಳು ಕಾರ್ಯಗತರಾಗಿದ್ದಾರೆ. ಅದೇ
ನಿಟ್ಟಿನಲ್ಲಿ ಇಷ್ಟು ದಿನ ನಾವು ಹೊರಟ್ಟಿ ಅವರ ಜೊತೆಗಿದ್ದೆವು. ಸದ್ಯ ಬಸವರಾಜ ಹೊರಟ್ಟಿ
ಅವರ ಸಲಹೆ ಮೇರೆಗೆ ನಾವು ಬಿಜೆಪಿ ಅಭ್ಯರ್ಥಿ ಅರುಣ ಶಹಾಪೂರ ಅವರಿಗೆ ಬೆಂಬಲ
ಸೂಚಿಸಿದ್ದೇವೆ ಎಂದರು.
ಬೆಳಗಾವಿ ನಗರ ಘಟಕದ ಅಧ್ಯಕ್ಷ ಎಂ. ಎಸ್. ದೊಡಮನಿ ಅವರು ಮಾತನಾಡಿ, ಸಂಘದ
ಪದಾಧಿಕಾರಿಗಳು ಎಲ್ಲರೂ ಸೇರಿ ಅರುಣ ಶಹಾಪೂರ ಅವರಿಗೆ ಬೆಂಬಲ ನೀಡಲು
ನಿರ್ಧರಿಸಲಾಗಿದೆ. ಅದರಂತೆ ಅರುಣ ಶಹಾಪೂರ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ
ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಎಸ್.ಎಸ್. ಕಾಂಬ್ಳೆ, ಟಿ.ಎಸ್. ಲಮಾಣಿ, ಎನ್.ಜಿ. ಕುಕಡೊಳ್ಳಿ, ಐ.ಬಿ. ಚಿನಗುಡಿ, ಯು.ಬಿ.ದಿಗ್ಗಾಯ,
ಎಸ್.ವಿ.ಕಿತ್ತೂರಮಠ, ಇಮಾನುಲ್.ಬಿ ಹಾಗೂ ಇತರರು ಹಾಜರಿದ್ದರು.