Latest

ಸದಾನಂದ ಗೌಡ, ಕಟೀಲ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಕೆ; ಆಕ್ರೋಶದ ಪರಮಾವಧಿ !

ಪ್ರಗತಿವಾಹಿನಿ ಸುದ್ದಿ, ಪುತ್ತೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ನೆಲಕಚ್ಚಿರುವುದು ಎಲ್ಲೆಡೆ ಕಾರ್ಯಕರ್ತರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷದ ಹೈಕಮಾಂಡ್ ನ ತಪ್ಪು ಹೆಜ್ಜೆಗಳ ಬಗ್ಗೆ ಅಸಮಾಧಾನಗಳು ವ್ಯಕ್ತವಾಗುತ್ತಲೇ ಇವೆ.

ಏತನ್ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಜನನಿಬಿಡ ಪ್ರದೇಶವಾದ ಸರಕಾರಿ ಬಸ್ ನಿಲ್ದಾಣದ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹಾಗೂ ಸಂಸದ ಸದಾನಂದ ಗೌಡ ಅವರ ಶ್ರದ್ಧಾಂಜಲಿ ಬ್ಯಾನರ್ ತಯಾರಿಸಿ ಅದಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಬ್ಯಾನರ್ ಮೇಲೆ ‘ನೊಂದ ಹಿಂದೂ ಕಾರ್ಯಕರ್ತರು’ ಎಂದು ಬರೆಯಲಾಗಿದೆ.

Home add -Advt

ಬಿಜೆಪಿ ನಿಷ್ಠಾವಂತ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ನೀಡುವಂತೆ ಪುತ್ತೂರಿನಲ್ಲಿ ಈ ಬಾರಿ ತೀವ್ರ ಒತ್ತಾಯಗಳು ಕಾರ್ಯಕರ್ತರ ವಲಯದಿಂದ ಕೇಳಿಬಂದಿದ್ದವು. ಆದರೆ ಹೈಕಮಾಂಡ್ ಇದಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡದೆ ಪುತ್ತಿಲ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಇದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಪುತ್ತಿಲ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಪುತ್ತಿಲ ಅವರು ಗೆಲುವು ಸಾಧಿಸದಿದ್ದರೂ ಎರಡನೇ ಸ್ಥಾನದಲ್ಲಿದ್ದರು. ಬಿಜೆಪಿ 3ನೇ ಸ್ಥಾನಕ್ಕೆ ಕುಸಿದಿದೆ.

ಇನ್ನೂ ಈ ಆಕ್ರೋಶ ತಣಿದಂತಿಲ್ಲ. ಹೀಗಾಗಿ ಸದಾನಂದ ಗೌಡ ಹಾಗೂ ಕಟೀಲ್ ಅವರ ಶ್ರದ್ಧಾಂಜಲಿ ಬ್ಯಾನರ್ ಅಳವಡಿಸಿ ಚಪ್ಪಲಿ ಹಾರ ಹಾಕಿ ಅತಿರೇಕದ ಕೋಪ ವ್ಯಕ್ತಪಡಿಸಲಾಗಿದೆ ಎನ್ನಲಾಗಿದ್ದು ಇದಕ್ಕೆ ಖಂಡನೆಗಳೂ ವ್ಯಕ್ತವಾಗಿವೆ.

https://pragati.taskdun.com/daughter-lobby-on-behalf-of-father-for-dcm-post/

https://pragati.taskdun.com/dr-k-sudhakarfansuicidechikkaballapura/
https://pragati.taskdun.com/the-kerala-story-fame-actress-adah-sharma-met-with-a-road-accident/

Related Articles

Back to top button