Kannada NewsKarnataka News

ಜ್ಯೂನಿಯರ್ ಕಾಲೇಜುಗಳ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ – ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಗೋಕಾಕ ಹಾಗೂ ಮೂಡಲಗಿ ತಾಲೂಕಿನ ವಿದ್ಯಾರ್ಥಿಗಳು ಉನ್ನತವಾದ ಸ್ಥಾನ ಪಡೆಯಬೇಕೆಂಬುದು ನಮ್ಮ ಅಪೇಕ್ಷೆಯಾಗಿದ್ದು, ಈ ದಿಸೆಯಲ್ಲಿ ಉಭಯ ತಾಲೂಕಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದೇನೆ. ಶಿಕ್ಷಕರಿಂದ ಮಾತ್ರ ದೇಶದ ಉನ್ನತಿ ಮತ್ತು ಪ್ರಗತಿ ಸಾಧ್ಯವೆಂದು ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.

ಸೋಮವಾರ ತಾಲೂಕಿನ ಅರಭಾವಿ ಹತ್ತಿರದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ಮೂಡಲಗಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ಸಮುದಾಯ ಈ ರಾಷ್ಟ್ರದ ಆಸ್ತಿ ಎಂದು ಬಣ್ಣಿಸಿದರು.

ನಮ್ಮ ಭಾಗದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್, ಕೆಪಿಎಸ್ ಸೇರಿದಂತೆ ಉನ್ನತ ಶ್ರೇಣಿಯ ಅಧಿಕಾರಿಗಳಾಗಬೇಕು. ಈ ಮೂಲಕ ನಮ್ಮ ನಾಗರೀಕರಿಗೆ ಅಂತಹ ಅಧಿಕಾರಿಗಳ ಸೇವೆ ಲಭಿಸಬೇಕು. ಮೂಡಲಗಿ ಮತ್ತು ಗೋಕಾಕ ತಾಲೂಕುಗಳಲ್ಲಿ ಅಂತಹ ಪ್ರತಿಭೆಗಳ ಅನ್ವೇಷಣೆ ಕಾರ್ಯವನ್ನು ಎಲ್ಲರೂ ಸೇರಿ ಮಾಡೋಣ. ನಮ್ಮ ತಾಲೂಕುಗಳ ಕೀರ್ತಿ ಪತಾಕೆಯು ರಾಜ್ಯ ಮತ್ತು ರಾಷ್ಟ್ರದಾದ್ಯಂತ ಪಸರಿಸಲು ಶೈಕ್ಷಣಿಕ ಪ್ರಗತಿಗಾಗಿ ನಮ್ಮ ಪ್ರಯತ್ನ ಮುಂದುವರೆಯಲಿದೆ. ಸಮಾಜದ ಸುಧಾರಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರವಾಗಿದೆ ಎಂದು ಹೇಳಿದರು.

ಮೂಡಲಗಿ ವಲಯದಲ್ಲಿ ಈಗಾಗಲೇ ಶಿಕ್ಷಣ ಸುಧಾರಣೆಗೆ ವಿಶೇಷ ಆಸಕ್ತಿ ಹೊಂದಿದ್ದೇವೆ. ೨೦೦೪ ರಿಂದ ಅರಭಾವಿ ಕ್ಷೇತ್ರದ ಶಾಸಕನಾದಾಗಿನಿಂದ ಇಲ್ಲಿಯವರೆಗೆ ೨೩ ಹೊಸ ಸರ್ಕಾರಿ ಪ್ರೌಡ ಶಾಲೆಗಳನ್ನು, ೧೨ ಸರ್ಕಾರಿ ವಸತಿ ಶಾಲೆಗಳನ್ನು, ಮೂಡಲಗಿಯಲ್ಲಿ ಸರ್ಕಾರಿ ಪದವಿ ಕಾಲೇಜು, ೨೭ ಸರ್ಕಾರಿ ವಸತಿ ನಿಲಯಗಳು, ನಂತರ ೫ ವಿಶೇಷ ಶಾಲಾ-ಕಾಲೇಜುಗಳನ್ನು ಮಂಜೂರು ಮಾಡಿಸಲಾಗಿದೆ. ಖಾಸಗಿ ಶಾಲೆಗಳ ಪೈಪೋಟಿಗಳ ಮಧ್ಯೆ ಸರ್ಕಾರಿ ಶಾಲೆಗಳಲ್ಲಿ ಸುಮಾರು ೫೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದಕ್ಕೆ ಸರ್ಕಾರಿ ಶಾಲೆಗಳಲ್ಲಿನ ಉತ್ತಮ ಗುಣಮಟ್ಟದ ಶಿಕ್ಷಣವೇ ಕಾರಣವಾಗಿದೆ ಎಂದರು.

ಮೂಡಲಗಿ ವಲಯದಲ್ಲಿ ಬೇಟಗೇರಿ, ಮೂಡಲಗಿ, ಖಾನಟ್ಟಿ, ಅವರಾದಿಗಳಲ್ಲಿ ಸರ್ಕಾರಿ ಕಿರಿಯ ಮಹಾವಿದ್ಯಾಲಯವನ್ನು ಆರಂಭಿಸುವುದಾಗಿ ತಿಳಿಸಿದ ಅವರು,  ಕೋವಿಡ್ ಕಾರಣದಿಂದ ೨ ವರ್ಷಗಳಿಂದ ಶಿಕ್ಷಕರ ದಿನಾಚರಣೆ ಆಚರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ವರ್ಷ ಅದ್ಧೂರಿಯಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಮೊದಲು ಮೆಳವಂಕಿ ಗ್ರಾಮದಲ್ಲಿ ಕಾರ್ಯಕ್ರಮವು ನಿಗದಿಯಾಗಿತ್ತು. ಆದರೆ ವರುಣನ ಅರ್ಭಟದಿಂದ ಕಾರ್ಯಕ್ರಮವನ್ನು ಬಸವೇಶ್ವರ ಸಭಾ ಭವನಕ್ಕೆ ಸ್ಥಳಾಂತರಿಸಲಾಯಿತು ಎಂದು  ಹೇಳಿದರು.

ಸೇವಾ ನಿವೃತ್ತರಾದ ಶಿಕ್ಷಕರು, ಶಾಲೆಗಳಿಗೆ ನಿವೇಶನ ನೀಡಿರುವ ಭೂದಾನಿಗಳು, ಶಿಕ್ಷಕ ಸಾಧಕರನ್ನು ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸತ್ಕರಿಸಿ ಗೌರವಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗೋಕಾಕದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೋ. ಚಂದ್ರಶೇಖರ ಅಕ್ಕಿ ಅವರು ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದರು.

ಮೂಡಲಗಿ ವಲಯದ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೂಡಲಗಿ ವಲಯದ ಶೈಕ್ಷಣಿಕ ಸುಧಾರಣೆಗಳನ್ನು ವಿವರಿಸಿದರು.

ವೇದಿಕೆಯಲ್ಲಿ ಚಿಕ್ಕೋಡಿ ಡಿಡಿಪಿಆಯ್ ಮೋಹನಕುಮಾರ ಹಂಚಾಟೆ, ಮೂಡಲಗಿ ತಹಶೀಲದಾರ ಡಿ.ಜೆ.ಮಹಾತ, ಮೂಡಲಗಿ ತಾ.ಪಂ ಇಓ ಎಫ್.ಬಿ.ಚಿನ್ನನವರ, ಗೋಕಾಕ ತಾ.ಪಂ ಇಓ ಎಮ್.ಎಚ್.ದೇಶಪಾಂಡೆ, ಮೂಡಲಗಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಗೋಕಾಕ ಟಿಎಪಿಸಿಎಮ್‌ಎಸ್ ಅಧ್ಯಕ್ಷ ಅಶೋಕ ನಾಯಿಕ, ಜಿ.ಪಂ ಮಾಜಿ ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ, ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಪರಮೇಶ್ವರ ಹೊಸಮನಿ, ಗೋವಿಂದ ಕೊಪ್ಪದ, ಎಪಿಎಮ್‌ಸಿ ಮಾಜಿ ಉಪಾಧ್ಯಕ್ಷ ಎಮ್.ಎಮ್.ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಪ್ರಭಾ ಶುಗರ‍್ಸ್ ಉಪಾಧ್ಯಕ್ಷ ರಾಮಣ್ಣ ಮಹಾರೆಡ್ಡಿ, ಬಸನಗೌಡ ಪಾಟೀಲ(ಮೆಳವಂಕಿ),ಹಣಮಂತ ತೇರದಾಳ, ಎಮ್.ಕೆ.ಕುಳ್ಳೂರ, ರವಿ ಪರುಶೆಟ್ಟಿ, ಶಿವಾನಂದ ಕಮತಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಶ ಪಾಟೀಲ, ಸಂತೋಷ ಸೋನವಾಲ್ಕರ, ಮೂಡಲಗಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಅರಭಾವಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ತುಕಾರಾಮ ಮಾದರ, ಬಿಸಿಯೂಟ ಸಹಾಯಕ ನಿರ್ದೇಶಕ ಎ.ಬಿ.ಮಲಬನ್ನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

 

https://pragati.taskdun.com/latest/radhakrishnan-birthday-celebrationteachers-daycm-basavaraj-bommai/

 

https://pragati.taskdun.com/belgaum-news/teachers-stands-in-a-position-to-be-worshiped-always-lakshmi-hebbalkar/

https://pragati.taskdun.com/latest/balachandra-jarakiholibelagavimudalagi11-colleges/

https://pragati.taskdun.com/latest/satish-jarakiholipashchapura-degree-collegebelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button