*ನಗರವಾಸಿಗಳೇ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಪಾಲ್ಗೊಳ್ಳಿ : ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಕರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾರತ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ದಿಸೆಯಲ್ಲಿ ಹಮ್ಮಿಕೊಂಡಿರುವ “ಸ್ವಚ್ಛ ಸರ್ವೇಕ್ಷಣ ಅಭಿಯಾನ”ದಲ್ಲಿ ನಗರವಾಸಿಗಳೆಲ್ಲರೂ ಪಾಲ್ಗೊಳ್ಳಬೇಕೆಂದು ಪಾಲಿಕೆ ಆಯುಕ್ತ ಕಾರ್ತಿಕ್ ಎಂ.ಅವರು ಕರೆ ನೀಡಿದ್ದಾರೆ.
ಬುಧವಾರ ಈ ಕುರಿತು ಪಾಲಿಕೆಯ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಭಾರತ ಸರ್ಕಾರವು 2016 ರಿಂದ ” ಸ್ವಚ್ಛ ಭಾರತ್ ಮಿಷನ್ ” ಆರಂಭಿಸಿದ್ದು, ನಗರವಾಸಿಗಳ ಅಭಿಪ್ರಾಯಕ್ಕನುಗುಣವಾಗಿ ಉತ್ತಮ ಪರಿಸರಪೂರಿತ ವಾತಾವರಣ ನಿರ್ಮಿಸುವುದೇ ಇದರ ಮೂಲ ಉದ್ದೇಶವಾಗಿದೆ.
ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುವ ನಗರ ಪಾಲಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಹುಮಾನ, ಸ್ಟಾರ್ ರ್ಯಾಂಕಿಂಗ್ ಕೊಡುವ ಸಂಪ್ರದಾಯವನ್ನು ಸಹ ಸರ್ಕಾರ ಹೊಂದಿದೆ. ಇಂತಹ ಉತ್ತಮ ಉದ್ದೇಶ ಹೊಂದಿರುವ ಅಭಿಯಾನದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯೂ ಪಾಲ್ಗೊಂಡಿದೆ. ಈಗಾಗಲೇ ಅಭಿಯಾನದಲ್ಲಿ ಪಾಲ್ಗೊಂಡಿರುವ ನಗರದ ಸುಮಾರು 20,339 ಜನ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಬೆಳಗಾವಿ ನಗರದ ಒಟ್ಟು ಸಂಖ್ಯೆಯಲ್ಲಿ ಶೇ. 5 ರಷ್ಟು ಜನ ತಮ್ಮ ಅಭಿಪ್ರಾಯ ತಿಳಿಸಿದರೆ ನಿಗದಿತ ಗುರಿ ಮುಟ್ಟಬಹುದು. ಕಸ, ಶೌಚಾಲಯ ನಿರ್ವಹಣೆ ಸೇರಿದಂತೆ ಒಟ್ಟು ಐದು ಪ್ರಶ್ನೆಗಳ ಸರಣಿ ಇದ್ದು, ಅಭಿಯಾನದ ಸ್ಕ್ಯಾನರನ್ನು ಸ್ಕ್ಯಾನ್ ಮಾಡಿ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಅಭಿಪ್ರಾಯ ತಿಳಿಸಬಹುದು. ಪಾಲಿಕೆಯಿಂದ ಅಭಿಯಾನದ ಪ್ರತಿನಿಧಿಗಳು ಸಹ ವಿವಿಧ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ ಅವರೊಂದಿಗೆ ಸಹಕರಿಸಿ ಇಲ್ಲವೇ ಸ್ವತಹ ತಾವೇ ಯಾಪ್ ಮೂಲಕ ಅಭಿಪ್ರಾಯಗಳನ್ನು ತಿಳಿಸಿ ಅಭಿಯಾನ ಯಶಸ್ವಿಗೊಳಿಸಬೇಕೆಂದು ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.



