*ಬೇಟೆಯಾಡಿ ಅರಣ್ಯಾಧಿಕಾರಿಗಳನ್ನು ಮರಕ್ಕೆ ಕಟ್ಟಿ ವಿಕೃತಿ ಮೆರೆದ ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ವನ್ಯಜೀವಿಗಳನ್ನು ಬೇಟೆಯಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಕಿಡಿಗೇಡಿಗಳನ್ನು ಹೆಡೆಮುರಿ ಕಟ್ಟಲು ಹೋದ ಅರಣ್ಯಾಧಿಕಾರಿಗಳ ಮೇಲೆಯೇ ಬೇಟೆಗಾರರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಆರೋಪಿಗಳು ಕೆಲವು ದಿನಗಳ ಹಿಂದೆ ಕಾಡುಹಂದಿಯೊಂದನ್ನು ಬೇಟೆಯಾಡಿ, ಆ ದೃಶ್ಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಲರ್ಟ್ ಆದ ವಲಯ ಅರಣ್ಯಾಧಿಕಾರಿ ಭಾಗಪ್ಪಗೌಡ, ಗಸ್ತು ಸಿಬ್ಬಂದಿಗಳಾದ ಲಾಲ್ ಅಹ್ಮದ್ ಹಾಗೂ ಕಾಶಿನಾಥ್ ರಾಠೋಡ್ ಅವರೊಂದಿಗೆ ಆರೋಪಿಗಳ ಪತ್ತೆಗಾಗಿ ಕಾಡಿನಲ್ಲಿ ದಾಳಿ ನಡೆಸಿದ್ದಾರೆ.
ಆದರೆ ಈ ವೇಳೆ ಅರಣ್ಯ ಸಿಬ್ಬಂದಿಯನ್ನು ಕಂಡು ಹೆದರುವ ಬದಲಿಗೆ ತಿರುಗಿಬಿದ್ದ ಬೇಟೆಗಾರರ ಜಾಲ, ಅಧಿಕಾರಿಗಳನ್ನು ಸುತ್ತುವರಿದು ಒತ್ತೆಯಾಳಾಗಿ ಇಟ್ಟುಕೊಂಡಿದರು.
ಅಷ್ಟಕ್ಕೇ ನಿಲ್ಲದ ಖದೀಮರು ಅಧಿಕಾರಿಗಳನ್ನು ಕ್ರೂರವಾಗಿ ಜಾಲಿ ಗಿಡಕ್ಕೆ ಕಟ್ಟಿಹಾಕಿ, ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ. ಬೇಟೆಗಾರರ ಈ ಭೀಕರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಆರ್ಎಫ್ಒ ಭಾಗಪ್ಪಗೌಡ ಅವರನ್ನು ಸದ್ಯ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅರಣ್ಯ ರಕ್ಷಕರ ಮೇಲೆಯೇ ನಡೆದಿರುವ ಈ ಅಮಾನವೀಯ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಒಟ್ಟು 11 ಮಂದಿ ಆರೋಪಿಗಳ ವಿರುದ್ಧ ಗಂಭೀರ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತಕ್ಷಣವೇ ಜಂಟಿ ಕಾರ್ಯಾಚರಣೆ ನಡೆಸಿ, ಸದ್ಯ ನಾಲ್ಕು ಜನ ಪ್ರಮುಖ ಆರೋಪಿಗಳನ್ನು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.
ದಾಳಿ ನಡೆಸಿ ಸದ್ಯ ತಲೆಮರೆಸಿಕೊಂಡಿರುವ ಇನ್ನುಳಿದ ಏಳು ಜನ ಖದೀಮರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ. ತನಿಖೆ ಚುರುಕುಗೊಂಡಿದೆ.



