
ಪ್ರಗತಿವಾಹಿನಿ ಸುದ್ದಿ; ಕಾರವಾರ: ಬೈಕ್ ಸವಾರನೊಬ್ಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಗುಡ್ಡ ಕುಸಿತಗೊಂಡು ಬೈಕ್ ಮೇಲೆಯೇ ಬಿದ್ದಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ನಡೆದಿದೆ.
ಗಿರೀಶ್ ಬುಧವಂತ ನಾಯ್ಕ ಬಚಾವ್ ಆದ ಸವಾರ. ಬೃಹತ್ ಬಂಡೆ ರಸ್ತೆ ಮೇಲೆ ಉರುಳಿ ಬಂದ ಪರಿಣಾಮ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಗಿರೀಶ್ ಬೈಕ್ ಸಂಪೂರ್ಣ ಹಾನಿಯಾಗಿದೆ. ಗಿರೀಶ್ ಗೆ ಸಣ್ಣಪುಟ್ಟ ಗಾಯಗಳಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣಕ್ಕಾಗಿ ತೆರವು ಮಾಡಿದ್ದ ಗುಡ್ಡದಿಂದ ಈ ಬೃಹತ್ ಕಲ್ಲುಬಂಡೆ ಉರುಳಿದೆ. ಮಳೆಗಾಲದಲ್ಲಿ ರಸ್ತೆ ಅಗಲೀಕರಣ ಕಾರ್ಯವನ್ನ ಐಆರ್ಬಿ ಕಂಪನಿ ಮಾಡುತಿದ್ದು, ಅವೈಜ್ಞಾನಿಕ ಕಾಮಗಾರಿಯೇ ಘಟನೆಗೆ ಕಾರಣ ಎನ್ನಲಾಗಿದೆ. ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.