
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮ್ಮ ಮನೆ ಮೇಲಿನ ಇಡಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಜಮೀರ್ ಅಹ್ಮದ್ ನನ್ನ ಏಳಿಗೆ ಸಹಿಸದೇ ನನ್ನ ವೀಕ್ ಮಾಡಬೇಕು ಎಂಬ ಕಾರಣಕ್ಕೆ ಈ ದಾಳಿ ನಡೆಸುವಂತೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ನಾನು ಈ ಹಿಂದೆ ಇದ್ದ ಪಕ್ಷದವರೇ ದಾಳಿ ಮಾಡಿಸಿದ್ದಾರೆ. ನಾನು ಈ ಮಟ್ಟಕ್ಕೆ ಬೆಳೆಯುತ್ತೇನೆ ಎಂದು ಅವರು ನಿರೀಕ್ಷಿಸಿರಲಿಲ್ಲ. ನನ್ನ ಬೆಳವಣಿಗೆ ಸಹಿಸದೇ ಇಡಿ ದಾಳಿ ಮಾಡಿಸಿದ್ದಾರೆ. ಅವರ್ಯಾರು ಎಂದು ನಾನು ಹೆಸರು ಹೇಳಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಪರೋಕ್ಷ ಆರೋಪ ಮಾಡಿದ್ದಾರೆ.
ನನ್ನ ಮನೆ ಮೇಲೆ ನಡೆದಿರುವುದು ಇಡಿ ದಾಳಿ ಹೊರತು ಐಟಿ ದಾಳಿಯಲ್ಲ. ಐಟಿ ದಾಳಿ ಎಂಬ ಬಗ್ಗೆಯೂ ಸುದ್ದಿ ಬರುತ್ತಿದೆ. ಆದರೆ ಅದು ಸುಳ್ಳು. ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ. ಈ ದಾಳಿ ಹಿಂದೆ ಷಡ್ಯಂತ್ರ ನಡೆದಿದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.