*ಆಸ್ಪತ್ರೆ ಸಿಬ್ಬಂದಿ ಅಗ್ನಿ ಅವಘಡ ಆಗದಂತೆ ನೋಡಿಕೊಳ್ಳಬೇಕು: ಡಾ. ಎಂ.(ಕರ್ನಲ್) ದಯಾನಂದ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಗ್ನಿ ಅವಗಡಗಳು ಕೆಲವು ಸಂದರ್ಭದಲ್ಲಿ ಅನೇಕ ಸಾವು ನೋವುಗಳಿಗೆ ಕಾರಣವಾಗುತ್ತದೆ. ಆದರಲ್ಲಿಯೂ ಆಸ್ಪತ್ರೆ ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ಅಗ್ನಿ ದುರಂತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಾಗೃತಿ ಮೂಡಿಸಬೇಕಾಗಿದೆ. ಅದರಲ್ಲಿಯೂ ಆಸ್ಪತ್ರೆಯಲ್ಲಿರುವ ಉದ್ಯೋಗಿಗಳು ಅಗ್ನಿ ಅವಗಡ ತಪ್ಪಿಸುವ ಕ್ರಮಗಳನ್ನು ಕರಗತ ಮಾಡಿಕೊಂಡಿರಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ. (ಕರ್ನಲ್) ದಯಾನಂದ ಅವರಿಂದಿಲ್ಲಿ ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಏರ್ಪಡಿಸಲಾದ ಅಗ್ನಿ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಅಗ್ನಿ ಅಪಘಾತಗಳನ್ನು ತಡೆಗಟ್ಟುವ ವಿಧಾನಗಳು ಪ್ರತಿಯೊಬ್ಬ ಸಿಬ್ಬಂದಿಗೂ ಗೊತ್ತಿರಬೇಕು. ಅದರಿಂದ ಮುಂದಾಗುವ ಅವಗಡಗಳನ್ನು ತಪ್ಪಿಸಲು ಸಹಕಾರಿಯಾಗುತ್ತದೆ. ಆಸ್ಪತ್ರೆಯಲ್ಲಿ ಉದ್ಯೋಗಿಯು ತೊಂದರೆಗೊಳಗಾದರೆ ರೋಗಿಗೂ ಕೂಡ ತೊಂದರೆ. ಅಗ್ನಿಯ ವಿಕೋಪಗಳನ್ನು ತಡೆಯಲು ಸುರಕ್ಷತಾ ಸಾಧನಗಳ ಪರಿಚಯ ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು ಎಂಬುದರ ಕುರಿತು ಉದ್ಯೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಪಡಿಸಬೇಕು ಎಂದು ಸಲಹೆ ನೀಡಿದರು.
ಕ್ಲಿನಿಕಲ್ ಡೈರೆಕ್ಟರ ಡಾ. ಮಾಧವ ಪ್ರಭು ಮಾತಾನಾಡಿ, ಆಸ್ಪತ್ರೆಯಲ್ಲಿ ಸಂಭವಿಸಬಹುದುಆದ ಅಗ್ನಿಗಳಿಂದ ಸಾಕಷ್ಟು ತೊಂದರೆಯುಂಟಾಗುತ್ತದೆ. ಆದ್ದರಿಂದ ಅಗ್ನಿ ಸುರಕ್ಷತೆಯ ಕುರಿತು ಸಿಬ್ಬಂದಿಗಳು ಜಾಗೃತೆವಹಿಸಬೇಕು. ಅಲ್ಲದೆ ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ತಿಳಿದಿರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ರಂಗನಾಥ ರಾಠೋಡ್ ಅವರು ಮಾತನಾಡಿ ಯಾವುದೇ ತುರ್ತು ಸಂದರ್ಭದಲ್ಲಿ ನಮ್ಮ ವಿಭಾಗಗವು ಅತ್ಯಂತ ಶೀಘ್ರದಲ್ಲಿ ಕಾರ್ಯಾರಂಭ ಮಾಡುತ್ತದೆ. ಕೇವಲ ಅಗ್ನಿ ತಗುಲಿದಾಗ ಮಾತ್ರವಲ್ಲ, ಭೂಕಂಪ, ನೀರಿನಲ್ಲಿ ದೊಡ್ಡ ಅಪಘಾತ, ಬೆಂಕಿ ಅವಗಡ ಸೇರಿದಂತೆ ಅನೇಕ ಕಾರ್ಯಗಳಲ್ಲಿ ಅತೀ ಶೀಘ್ರದಲ್ಲಿ ಸ್ಪಂಧಿಸುವ ಇಲಾಖೆ ನಮ್ಮದು. ಜೀವ ರಕ್ಷಣೆಗಾಗಿ ನಾವು ಧುಮಕುತ್ತೇವೆ ಎಂದು ತಿಳಿಸಿದರು.
ಆಸ್ಪತ್ರೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಲೋಕೇಶ ಅವರು ಮಾತನಾಡಿದರು. ಆಸ್ಪತ್ರೆಯ ಅಗ್ನಿ ಸುರಕ್ಷಾ ಅಧಿಕಾರಿ ಶಾನೂರ ಲಕ್ಕುಂಡಿ ನಿರೂಪಿಸಿದರು.

