NationalTravelWorld

*ಭಾರತ-ಪಾಕಿಸ್ತಾನ ಜಂಟಿ ಕಾರ್ಯಾಚರಣೆ: ಮುಳುಗುತ್ತಿದ್ದ 12 ಜನರ ರಕ್ಷಣೆ*

ಪ್ರಗತಿವಾಹಿನಿ ಸುದ್ದಿ: ಗುಜರಾತ್‌ನ ಪೋರ್‌ಬಂದರ್‌ನಿಂದ ಇರಾನ್‌ ನ ಅಬ್ಬಾಸ್ ಬಂದರಿಗೆ ಪ್ರಯಾಣಿಸುತ್ತಿದ್ದ ವ್ಯಾಪಾರಿ ಹಡಗು ಬುಧವಾರ ಮುಳುಗಡೆಯಾಗಿದ್ದು, ಅದರಲ್ಲಿದ್ದ 12 ಸಿಬ್ಬಂದಿಯನ್ನು ಭಾರತೀಯ ಕರಾವಳಿ ಪಡೆ ಪಾಕಿಸ್ತಾನದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ.

ಉತ್ತರ ಅರಬ್ಬಿ ಸಮುದ್ರದಲ್ಲಿ ಭಾರತದ ಸಾಗರ ವ್ಯಾಪ್ತಿಯ ಹೊರಗೆ ಹಾಗೂ ಪಾಕಿಸ್ತಾನದ ಸಾಗರ ವಲಯದಲ್ಲಿ ‘ಎಂಎಸ್‌ವಿ ಅಲ್ ಪಿರಾನ್‌ಪಿರ್‌ ಎಂಬ ಹಡಗು ಮುಳುಗಡೆಯಾಗಿದೆ. ಈ ವೇಳೆ ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ ಜಂಟಿ ಕಾರ್ಯಾಚರಣೆ ನಡೆಸಿ ಸಿಬ್ಬಂದಿಯ ರಕ್ಷಣೆ ಮಾಡಿದೆ.

Home add -Advt

ಈ ಮಾನವೀಯ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯಿಂದ ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಪಿಎಂಎಸ್‌ಎ ನಡುವೆ ನಿಕಟ ಸಹಯೋಗ ಕಾಣಿಸಿಕೊಂಡಿದೆ. ಎರಡೂ ರಾಷ್ಟ್ರಗಳ ಕಡಲ ರಕ್ಷಣಾ ಸಮನ್ವಯ ಕೇಂದ್ರಗಳು ಕಾರ್ಯಾಚರಣೆಯ ಉದ್ದಕ್ಕೂ ನಿರಂತರ ಸಂವಹನವನ್ನು ನಡೆಸಿವೆ ಎಂದು ಐಸಿಜಿ ಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ವಾಣಿಜ್ಯ ಹಡಗು ಕೆಲವು ಸಾಮಾನ್ಯ ಸರಕುಗಳೊಂದಿಗೆ ಪೋರಬಂದರ್‌ಗೆ ತೆರಳುತ್ತಿದ್ದಾಗ ಸಮುದ್ರದಲ್ಲಿನ ಒರಟು ಪರಿಸ್ಥಿತಿ ಮತ್ತು ಪ್ರವಾಹದಿಂದಾಗಿ ಬುಧವಾರ ಮುಂಜಾನೆ ಮುಳುಗಿತು ಎಂದು ವರದಿಯಾಗಿದೆ. ಮಾಹಿತಿ ಪಡೆದ ಮುಂಬೈನಲ್ಲಿರುವ ಭಾರತೀಯ ಕೋಸ್ಟ್ ಗಾರ್ಡ್ ತಕ್ಷಣ ರಕ್ಷಣಾ ಕಾರ್ಯಕ್ಕೆ ತೆರಳಿದೆ. ಕರಾವಳಿ ಕಾವಲು ನೌಕೆ ಸಾರ್ಥಕ್ ತಕ್ಷಣವೇ ಅವಘಡದ ಸ್ಥಳಕ್ಕೆ ತೆರಳಿದೆ ಹಾಗೂ ಪಾಕಿಸ್ತಾನದ ಸಮುದ್ರ ರಕ್ಷಣಾ ಸಮನ್ವಯ ಕೇಂದ್ರವನ್ನು ಸಹ ಸಂಪರ್ಕಿಸಿದೆ. ಎಂಎಂಆರ್‌ಸಿ ಕೂಡ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸೇರಿಸಲಾಗಿದೆ.

Related Articles

Back to top button